
ಬೆಂಗಳೂರು: ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸಲು ಪಾದರಸ ಆಧಾರಿತ ವೈದ್ಯಕೀಯ ಸಾಧನಗಳನ್ನು ತ್ಯಜಿಸುವಂತೆ ತಜ್ಞರು ಸೇರಿದಂತೆ ಹಲವು ಆಗ್ರಹಿಸುತ್ತಿದ್ದಾರೆ.
ಭಾರತದಲ್ಲಿ ಪಾದರಸ ಹೊಂದಿರುವ ವೈದ್ಯಕೀಯ ಸಾಧನಗಳಾದ ಥರ್ಮಾಮೀಟರ್ಗಳು ಮತ್ತು ಸ್ಪಿಗ್ಮೋಮನೋಮೀಟರ್ಗಳನ್ನು ಸಂಪೂರ್ಣವಾಗಿ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ನಾಗರಿಕ ಸಮಾಜ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಕಾನ್ಸ್ಯೂಮರ್ ವಾಯ್ಸ್ ಮತ್ತು ಫೌಂಡೇಶನ್ ಫಾರ್ ಸಸ್ಟೈನಬಲ್ ಹೆಲ್ತ್ ಇಂಡಿಯಾ (FSHI) ಮಂಗಳವಾರ (ಆಗಸ್ಟ್ 12) ಬೆಂಗಳೂರಿನ ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ಈ ವೇಳೆ ಪಾದರಸ ಆಧಾರಿತ ವೈದ್ಯಕೀಯ ಸಾಧನಗಳಿಂದ ಜನರಿಗಾಗುವ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರಿಗೆ ಆಗುವ ಆರೋಗ್ಯದ ಅಪಾಯಗಳ ಕುರಿತು ಚರ್ಚೆಗಳನ್ನು ನಡೆಸಲಾಯಿತು.
ಪಾದರಸ ಹೊಂದಿರುವ ಥರ್ಮಾಮೀಟರ್ಗಳು ಮತ್ತು ಬಿಪಿ (ರಕ್ತದೊತ್ತಡ) ಮಾನಿಟರ್ಗಳು ಮುರಿದುಹೋದಾಗ ಅಥವಾ ಬಿಸಾಡಿದಾಗ ಅವುಗಳಲ್ಲಿ ಬಳಕೆ ಮಾಡಿರುವ ವಿಷಕಾರಿ ಪಾದರಸ ಆವಿಗಳನ್ನು ಬಿಡುಗಡೆ ಮಾಡುತ್ತವೆ, ಇದು ಶ್ವಾಸಕೋಶ, ಮೂತ್ರಪಿಂಡಗಳು ಮತ್ತು ನರಮಂಡಲವನ್ನು ತೀವ್ರವಾಗಿ ಹಾನಿಗೊಳಿಸುತ್ತದೆ. ಪಾದರಸದ ತ್ಯಾಜ್ಯವು ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತದೆ, ಆಹಾರ ಸರಪಳಿಯನ್ನು ಪ್ರವೇಶಿಸಿ, ಅಪಾಯವನ್ನುಂಟು ಮಾಡುತ್ತದೆ ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ತಜ್ಞರು ತಿಳಿಸಿದರು.
ಇದೇ ವೇಳೆ ಕೊಡೈಕೆನಾಲ್ನ ಥರ್ಮಾಮೀಟರ್ ಕಾರ್ಖಾನೆಯಲ್ಲಿನ ಮಾಲಿನ್ಯ ಘಟನೆಯನ್ನು ಸೆಂಟ್ ಜಾನ್ಸ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ನ ವೈದ್ಯಶಾಸ್ತ್ರದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಡೆನ್ನಿಸ್ ಕ್ಸೇವಿಯರ್ ಅವರು ಹಂಚಿಕೊಂಡರು.
ಪಾದರಸದ ವಿಷಕಾರಿ ಸ್ವರೂಪ, ಅದರ ಆರೋಗ್ಯದ ಅಪಾಯಗಳು ಮತ್ತು ವೈಯಕ್ತಿಕ ರಕ್ಷಣೆ ಮತ್ತು ಸುರಕ್ಷಿತ ವಿಲೇವಾರಿ ಕ್ರಮಗಳು ಮಹತ್ವವನ್ನು ಎತ್ತಿ ತೋರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೈಸ್ಟ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಅನಿಲ್ ಜೋಸೆಫ್ ಪಿಂಟೊ ಅವರು ಮಾತನಾಡಿ, ಜಾಗೃತಿ ಮೂಡಿಸುವಲ್ಲಿ ನಾಗರಿಕ ಸಮಾಜ, ಆರೋಗ್ಯ ವೃತ್ತಿಪರರು ಮತ್ತು ಪರಿಸರವಾದಿಗಳ ಸಕ್ರಿಯ ಪಾತ್ರವನ್ನು ಸ್ವಾಗತಿಸಿದರು.
2011 ರ ಅಧ್ಯಯನವು ಭಾರತವು ವೈದ್ಯಕೀಯ ಅಳತೆ ಸಾಧನಗಳಿಂದ ವಾರ್ಷಿಕವಾಗಿ ಸುಮಾರು (ಸುಮಾರು ಶೇ.69ರಷ್ಟು ಸ್ಪಿಗ್ಮೋಮನೋಮೀಟರ್ಗಳಿಂದ ಮತ್ತು ಉಳಿದವು ಥರ್ಮಾಮೀಟರ್ಗಳಿಂದ) ಎಂಟು ಟನ್ ಪಾದರಸವನ್ನು ಬಿಡುಗಡೆ ಮಾಡುತ್ತದೆ ಅಂದಾಜಿಸಿದೆ.
"ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ಮಹಿಳೆಯರು ಪಾದರಸಕ್ಕೆ ಒಡ್ಡಿಕೊಂಡರೆ ಅದರಿಂದ ಭವಿಷ್ಯದ ಪೀಳಿಗೆಗೆ ತೀವ್ರ ಅಪಾಯಗಳಿವೆ. ಹೀಗಾಗಿ ಪಾದರಸ ಆಧಾರಿತ ವೈದ್ಯಕೀಯ ಉಪಕರಣಗಳನ್ನು ತೆಗೆದುಹಾಕುವುದು, ಡಿಜಿಟಲ್ ಮತ್ತು ಅನೆರಾಯ್ಡ್ ಪರ್ಯಾಯಗಳ ಅನುಸರಿಸುವುದು ಉತ್ತಮ ಕ್ರಮವಾಗಿದೆ ಎಂದು ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಮುದಾಯ ವೈದ್ಯಕೀಯ ಪ್ರಾಧ್ಯಾಪಕ ಡಾ. ಲಲಿತಾ ಅವರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಹಿರಿಯ ಅಧಿಕಾರಿ ಡಾ. ಬಿ. ನಾಗಪ್ಪ ಅವರು ಮಾತನಾಡಿ, ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದರು.
ಎಲ್ಲಾ ಆರೋಗ್ಯ ಸೌಲಭ್ಯಗಳು ಪಾದರಸ ಪ್ರೋಟೋಕಾಲ್ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮಾಡಬೇಕು. ಪಾದರಸ-ಮುಕ್ತ ಪರ್ಯಾಯಗಳು ಅಳವಡಿಸಿಕೊಳ್ಳಬೇಕು. ಇಂದಿನ ಈ ಜವಾಬ್ದಾರಿಯುತ ಕ್ರಮವು ಭವಿಷ್ಯದ ಪೀಳಿಗೆಯನ್ನು ಹಾನಿಯಿಂದ ರಕ್ಷಿಸುತ್ತದೆ ಎಂದು ಹೇಳಿದರು.
Advertisement