Love Sex Dhoka: ಲಿವ್ ಇನ್ ಸಂಗಾತಿಗೆ ಲೈಂಗಿಕ ಶೋಷಣೆ, ಆಕೆಯ ತಂಗಿ ಮೇಲೂ ಅತ್ಯಾಚಾರ: ಆರೋಪಿ ಬಂಧನ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಲವ್ ಸೆಕ್ಸ್ ಧೋಖಾ ಪ್ರಕರಣ ವರದಿಯಾಗಿದ್ದು, ವಿವಾಹಿತನೋರ್ವ ತನ್ನ ಲಿವ್ ಇನ್ ಸಂಗಾತಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯಿಂದ 37ಲಕ್ಷ ರೂ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ನೆಲಮಂಗಲದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿವಾಹಿತ ವ್ಯಕ್ತಿ ಲಿವ್ ಇನ್ ಸಂಗಾತಿಗೆ ವಂಚನೆ ಮಾಡಿ, ಆಕೆಯ ತಂಗಿ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.
ಈ ಲವ್ ಸೆಕ್ಸ್ ದೋಖಾ ಪ್ರಕರಣದಲ್ಲಿ ಸಂತ್ರಸ್ತ ಯುವತಿಯನ್ನು ಬೆದರಿಸಿ ಲಕ್ಷಾಂತರ ಹಣ ಪಡೆದಿರುವ ಆರೋಪಿ, ಜತೆಗೆ ಆಕೆಯ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದಿದ್ದ. ಅಲ್ಲದೆ, ಯುವತಿಯ ಸಹೋದರಿ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಂಧಿತ ಆರೋಪಿಯನ್ನು ಶುಭಾಂಶು ಶುಕ್ಲಾ(27) ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಮೂಲತಃ ಹರಿಯಾಣ ಮೂಲದವನಾದ ಶುಭಾಂಶು ಶುಕ್ಲಾ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಟಿ.ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಐಷಾರಾಮಿ ಜೀವನಕ್ಕೆ ಮನಸೋತ ಯುವತಿಯರು, ಆತನೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಿ ವಂಚನೆಗೊಳಗಾಗಿದ್ದಾರೆ. ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೊದಲು ಸಂತ್ರಸ್ತೆಯ ಅಪ್ರಾಪ್ತ ವಯಸ್ಸಿನ ಸಹೋದರಿ ಜತೆ ಸ್ನೇಹ ಬೆಳೆಸಿದ್ದ ಆರೋಪಿ, ನಂತರ ಆಕೆಯ ಕುಟುಂಬಕ್ಕೂ ಪರಿಚಯವಾಗಿದ್ದ. ಬಳಿಕ ಬಾಲಕಿ ಸಹೋದರಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದ. ನಂತರ ಮಾಸ್ಟರ್ ಪ್ಲ್ಯಾನ್ ಮಾಡಿ ಆಕೆಯನ್ನು ಕರೆದುಕೊಂಡು ಬಂದಿದ್ದ. ನಂತರ ಫ್ಲ್ಯಾಟ್ ಒಂದರಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್ಶಿಪ್ನಲ್ಲಿದ್ದರು ಎನ್ನಲಾಗಿದೆ.
ಮೊದಲೇ ಮದುವೆಯಾಗಿದ್ದ ಆರೋಪಿ
ಇನ್ನು ಕೆಲ ದಿನಗಳ ಬಳಿಕ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಆಕೆಯ ಜತೆ ತಾನು ವಿಚ್ಛೇದನ ಪಡೆದುಕೊಳ್ಳುತ್ತೇನೆ. ನಿನ್ನ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ. ಶುಭಾಂಶು ಪತ್ನಿಯೂ ಸಂತ್ರಸ್ತೆ ಜತೆ ಮಾತಾಡಿದ್ದು ತಾನು ಆತನಿಗೆ ಡಿವೋರ್ಸ್ ನೀಡುವುದಾಗಿ ತಿಳಿಸಿದ್ದಳು.
ಹೀಗಾಗಿ ಶುಭಾಂಶು ಮೇಲೆ ಭರವಸೆ ಇಟ್ಟು ಸಂತ್ರಸ್ತೆ ಸಂಬಂಧ ಮುಂದುವರಿಸಿದ್ದಳು. ಆದರೆ, ಮತ್ತೊಬ್ಬ ಅಪ್ರಾಪ್ತ ಯುವತಿಗೂ ಶುಭಾಂಶು ಇದೇ ರೀತಿ ವಂಚಿಸುತ್ತಿರುವುದು ಸಂತ್ರಸ್ತೆಗೆ ಗೊತ್ತಾಗಿದೆ. ಆಕೆ ಮುಂದೆ ಈತನ ಬಂಡವಾಳವನ್ನು ಸಂತ್ರಸ್ತೆ ಬಯಲು ಮಾಡಿದ್ದಳು. ಆ ಬಳಿಕ ಶುಭಾಂಶು ಚಿತ್ರಹಿಂಸೆ ಆರಂಭವಾಗಿತ್ತು ಎಂದು ದೂರಲಾಗಿದೆ.
37 ಲಕ್ಷ ರೂ ವಂಚನೆ, ಜೀವ ಬೆದರಿಕೆ
ಸಂತ್ರಸ್ತ ಯುವತಿ ಬಳಿ 37 ಲಕ್ಷ ಹಣವನ್ನು ಪಡೆದಿದ್ದ ಆರೋಪಿ ಶುಭಾಂಶು, ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಸಹ ಕದ್ದಿದ್ದ. ಈ ಬಗ್ಗೆ ದೂರು ನೀಡಿದರೆ ಸಾಯಿಸುತ್ತೇನೆ ಎಂದು ಬೆದರಿಸಿದ್ದ. ಆ ಬಳಿಕ ಸಂತ್ರಸ್ತೆ ಚಿತ್ರಹಿಂಸೆ ತಾಳಲಾರದೆ ಶುಭಾಂಶುನನ್ನು ಬಿಟ್ಟು ಬಂದಿದ್ದಳು. ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ವಯಸ್ಸಿನ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಗ್ರೂಪ್ ಸ್ಟಡಿ ಮಾಡಲು ತೆರಳುತ್ತಿದ್ದಾಗ ಪರಿಚಯವಾಗಿದ್ದ ಶುಭಾಂಶು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ. ನಿನ್ನ ಮನೆಯವರನ್ನು ನನಗೆ ಪರಿಚಯ ಮಾಡಿಸು ಎಂದಿದ್ದ. ಹಾಗಾದರೆ ಮಾತ್ರ ತಾನು ನಿನ್ನ ಬಿಡುವುದು ಹೆದರಿಸಿದ್ದ ಎಂದು ಅಪ್ರಾಪ್ತ ಬಾಲಕಿ ಆರೋಪಿಸಿದ್ದಾಳೆ.

