ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ: ಉದ್ಯಮ ವಲಯದ ಸಾಧಕರಿಗೆ Invest Karnataka ಪ್ರಶಸ್ತಿ ಪ್ರದಾನ
ಬೆಂಗಳೂರು: ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಅಪಾರ ಕೊಡುಗೆ ನೀಡದವರಿಗೆ ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ವಿವಿಧ ಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಹೂಡಿಕೆ, ಉದ್ಯೋಗ ಸೃಷ್ಟಿ, ಸಂಶೋಧನೆ ಮತ್ತು ಅಭಿವೃದ್ಧಿ, ಸುಸ್ಥಿರತೆ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠತೆ ಸಾಧಿಸಿದ ಕಂಪನಿಗಳಿಗೆ ಪ್ರಶಸ್ತಿ ನೀಡಿ, ಗೌರವಿಸಿದರು.
ಹಿರಿಯ ಉಧ್ಯಮಿ ವಿಕ್ರಮ್ ಕಿರ್ಲೋಸ್ಕರ್ ಅವರಿಗೆ ಮರಣೋತ್ತರವಾಗಿ ಇಂಡಸ್ಟ್ರಿಯಲ್ ಲೆಗೆಸಿ ಪ್ರಶಸ್ತಿ ನೀಡಲಾಯಿತು. ಅವರ ಪರವಾಗಿ ಉದ್ಯಮಿ ಗೀತಾಂಜಲಿ ಕಿರ್ಲೋಸ್ಕರ್ ಪ್ರಶಸ್ತಿ ಸ್ವೀಕರಿಸಿದರು.
ಜಿಂದಾಲ್ ಸ್ಟೀಲ್ ಗ್ರೂಪ್ ಗೆ ‘ದಶಮಾನದ ಹೂಡಿಕೆದಾರ, ಏಕಸ್ ಕಂಪನಿಗೆ ‘ಕಾರ್ಯಪರಿಸರ ನಿರ್ವತೃ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಳಿದಂತೆ ಸನ್ ರೈಸ್ ವಲಯದಲ್ಲಿ ಸಾರ್ವಜನಿಕ ವಲಯದ ಎಚ್ಎಎಲ್, ಖಾಸಗಿ ವಲಯದ ಆರ್.ಟಿ.ಎಕ್ಸ್ (ವೈಮಾಂತರಿಕ್ಷ ರಕ್ಷಣಾ ವಲಯ), ಟೊಯೋಟಾ-ಕಿಲೋಸ್ಕರ್ (ವಾಹನ/ಇವಿ), ಬಯೋಕಾನ್ (ಬಿಟಿ/ಜೀವವಿಜ್ಞಾನ), ಬೋಯಿಂಗ್ (ಇಂಟರ್ನ್ಯಾಷನಲ್ ಪೊ›ಕ್ಯೂರ್ವೆಂಟ್ ಚಾಂಪಿಯನ್), ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್ (ಆರ್ ಅಂಡ್ ಡಿ), ಸ್ಯಾಮ್ಸಂಗ್ (ಇನ್ನೋವೇಶನ್ ಎಕ್ಸಲೆನ್ಸ್), ಫಾಕ್ಸಕಾನ್ (ಇನ್ವೆಸ್ಟೆಂಟ್ ಟೈಟನ್), ಟಾಟಾ ಎಲೆಕ್ಟ್ರಾನಿಕ್ಸ್ (ಉತ್ಪಾದನೆ), ಇನ್ಪೋಸಿಸ್ (ಉದ್ಯೋಗಸೃಷ್ಟಿ), ಶಾಹಿ (ಉತ್ಕೃಷ್ಟ ನಾಯಕತ್ವ) ಮತ್ತು ರೆನ್ಯೂ ಪವರ್ (ಮರುಬಳಕೆ ಇಂಧನ) ಕಂಪನಿಗಳಿಗೆ ವಿವಿಧ ವಿಭಾಗಗಳಲ್ಲಿ ’ಇನ್ವೆಸ್ಟ್ ಕರ್ನಾಟಕ’ಪುರಸ್ಕಾರಗಳನ್ನು ನೀಡಲಾಯಿತು.
ಜೆಎಸ್ಡಬ್ಲ್ಯು ಗ್ರೂಪ್ ಕರ್ನಾಟಕದ ಉತ್ಪಾದನಾ ಕ್ಷೇತ್ರ ಬೆಳೆಸುವಲ್ಲಿ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವಲ್ಲಿ ಮತ್ತು ಉದ್ಯೋಗಾವಕಾಶ ಸೃಷ್ಟಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ರಾಜ್ಯದಲ್ಲಿ ಈ ಗ್ರೂಪ್ ರೂ. 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಹೂಡಿಕೆಗಳನ್ನು ಮಾಡಿರುವುದು ವಿಶೇಷವಾಗಿದೆ. ಕಂಪನಿಯು ಉಕ್ಕು ಉತ್ಪಾದನೆ, ಗ್ರೀನ್ ಎನರ್ಜಿ, ಸಿಮೆಂಟ್ ಉತ್ಪಾದನೆ ಮತ್ತು ಬಂದರು ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದು, ಆರ್ಥಿಕ ದೃಢತೆ ಮತ್ತು ದೀರ್ಘಕಾಲೀನ ಅಭಿವೃದ್ಧಿ ಸಾಧಿಸಿದೆ.
ಜೆಎಸ್ಡಬ್ಲ್ಯೂ ಗ್ರೂಪ್ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ನಿಧಾನಕ್ಕೆ ಬೆಳೆಸುತ್ತಾ ಬಂದಿದೆ. ಜೆಎಸ್ಡಬ್ಲ್ಯೂ ಸ್ಟೀಲ್ ನ ವಿಜಯನಗರ ಘಟಕವು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಉಕ್ಕು ಸಾಮರ್ಥ್ಯ ಹೊಂದಿರುವ ಭಾರತದ ಅತಿದೊಡ್ಡ ಉಕ್ಕಿನ ಸ್ಥಾವರ ಎಂಬ ಖ್ಯಾತಿ ಗಳಿಸಿದೆ. ಜೊತೆಗೆ ನವೀಕರಿಸಬಹುದಾದ ಶಕ್ತಿ, ಸಿಮೆಂಟ್ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು, ದೊಡ್ಡ ಮಟ್ಟದ ಸಾಧನೆ ಮಾಡಿದೆ. ಪ್ರಸ್ತುತ ದೊರೆತಿರುವ ಪ್ರಶಸ್ತಿಯು ಕರ್ನಾಟಕವನ್ನು ಕೈಗಾರಿಕಾ ಶ್ರೇಷ್ಠ ರಾಜ್ಯವನ್ನಾಗಿ ರೂಪಿಸುವ ವಿಚಾರದಲ್ಲಿ ಅತ್ಯಂತ ಪ್ರಮುಖ ಕಂಪನಿಯಾಗಿ ಜೆಎಸ್ಡಬ್ಲ್ಯೂ ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜೆಎಸ್ಡಬ್ಲ್ಯೂ ಗ್ರೂಪ್ ಕರ್ನಾಟಕ ಮತ್ತು ಭಾರತದಾದ್ಯಂತ ಕೈಗಾರಿಕಾ ಕ್ರಾಂತಿ ನಡೆಸಲು, ಉದ್ಯೋಗ ಸೃಷ್ಟಿಸಲು ಮತ್ತು ಆರ್ಥಿಕ ಅಭಿವೃದ್ಧಿ ಹೆಚ್ಚಿಸಲು ಬದ್ಧವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ