ನಾರಾಯಣಪುರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಬಿಡುಗಡೆ; ಸರ್ಕಾರದ ವಿರುದ್ಧ ರೈತರ ಆಕ್ರೋಶ, ಪ್ರತಿಭಟನೆಗೆ ಮುಂದು

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ಗೂಗಲ್ ಬ್ಯಾರೇಜ್‌ಗೆ ನೀರು ಹರಿಸಿ, ಅಲ್ಲಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಅಣೆಕಟ್ಟಿಗೆ ನೀರು ಹರಿಸಲಾಗಿದೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆದಿದೆ.
ನಾರಾಯಣಪುರ ಜಲಾಶಯ
ನಾರಾಯಣಪುರ ಜಲಾಶಯ
Updated on

ವಿಜಯಪುರ: ರಾಜ್ಯದ ಬಿರುಬೇಸಿಗೆಯನ್ನೂ ಲೆಕ್ಕಿಸದೇ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ 1.24 ಟಿಎಂಸಿ ಅಡಿ ನೀರನ್ನು ತೆಲಂಗಾಣ ರಾಜ್ಯಕ್ಕೆ ಬಿಡುಗಡೆ ಮಾಡಿರುವುದಕ್ಕೆ ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.

ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ಗೂಗಲ್ ಬ್ಯಾರೇಜ್‌ಗೆ ನೀರು ಹರಿಸಿ, ಅಲ್ಲಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಅಣೆಕಟ್ಟಿಗೆ ನೀರು ಹರಿಸಲಾಗಿದೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆದಿದೆ.

ನಾರಾಯಣಪುರ ಅಣೆಕಟ್ಟಿನ ಮೂಲಕ ತೆಲಂಗಾಣಕ್ಕೆ 1 ಟಿಎಂಸಿ ಅಡಿ ನೀರು ಬಿಡಲಾಗಿದೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ ಬಸವರಾಜ್ ಅವರು ಖಚಿತಪಡಿಸಿದ್ದಾರೆ.

ಸರಕಾರದ ಆದೇಶದಂತೆ ನೀರು ಬಿಡುಗಡೆ ಮಾಡಿದ್ದೇವೆ. ಕುಡಿಯುವ ಉದ್ದೇಶಕ್ಕೆ 5 ಟಿಎಂಸಿ ಅಡಿ ನೀರು ಬಿಡುವಂತೆ ತೆಲಂಗಾಣ ಸರ್ಕಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಅವರ ಬೇಡಿಕೆ ಪೂರೈಸಲು ನಮ್ಮ ಬಳಿ ಅಷ್ಟು ಮಟ್ಟದಲ್ಲಿ ನೀರು ಇಲ್ಲದ ಕಾರಣ, ಸರ್ಕಾರ 1 ಟಿಎಂಸಿ ಅಡಿ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

ಆದರೆ ರೈತ ಸಂಘಟನೆಗಳು ಸರ್ಕಾರದ ಈ ನಿರ್ಧಾರವನ್ನು ಖಂಡಿಸಿವೆ. ಭಾರತೀಯ ಕಿಸಾನ್ ಸಂಘ (BKS) ಸೇರಿದಂತೆ ಇತರೆ ಸಂಘಟನೆಗಳು ಬೇಸಿಗೆಯಲ್ಲಿ ಎದುರಾಗುವ ನೀರಿನ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.

ನಾರಾಯಣಪುರ ಜಲಾಶಯ
ತೆಲಂಗಾಣಕ್ಕೆ 1.24 ಟಿಎಂಸಿ ನೀರು ಬಿಡುಗಡೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ತೆಲಂಗಾಣಕ್ಕೆ ನೀರು ಬಿಟ್ಟರೆ, ಬೇಸಿಗೆಯ ತಿಂಗಳುಗಳಲ್ಲಿ ನಮಗೆ ಸಮಸ್ಯೆಗಳು ಎದುರಾಗಲಿದೆ. ಆಕ್ಷೇಪಗಳ ನಡುವೆಯೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೀರು ಬಿಡಲು ವಿಶೇಷ ಆಸಕ್ತಿ ತೋರಿದ್ದಾರೆ ಎಂದು ಬಿಕೆಎಸ್ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ಕಿಡಿಕಾರಿದ್ದಾರೆ.

ಈ ನಡುವೆ ಅಖಂಡ ಕರ್ನಾಟಕ ರೈತ ಸಂಘ ಫೆಬ್ರವರಿ 28 ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಈ ಆಕ್ರೋಶದ ನಡುವೆಯೇ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ‘ನಾರಾಯಣಪುರ ಅಣೆಕಟ್ಟಿನಿಂದ ತೆಲಂಗಾಣಕ್ಕೆ 1 ಟಿಎಂಸಿ ಅಡಿ ನೀರು ಬಿಡಲಾಗಿದೆ. ಈ ವಿಚಾರದಲ್ಲಿ ಮುಚ್ಚುಮರೆ ಇಲ್ಲ, ‘ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳ ಜತೆ ಪರಸ್ಪರ ಸಹಕಾರದ ಮಾದರಿಯನ್ನು ಅನುಸರಿಸಿಕೊಂಡು ಬರಲಾಗಿದೆ. ಆ ರಾಜ್ಯದವರು ಕೂಡ ಕೆಲವು ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದ್ದಾರೆ. ತೆಲಂಗಾಣ ಸಚಿವರು ತಾವೇ ಬಂದು ನೀರು ಬಿಡುವಂತೆ ಮನವಿ ಮಾಡಿದ್ದರು. ನೀರು ಹರಿಸಲು ಅಧಿಕಾರಿಗಳಿಗೆ ನಾನು ಅನುಮತಿ ನೀಡಿದ್ದೇನೆಂದು ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿ, ನಮ್ಮ ಜಲಾಶಯಗಳಲ್ಲಿ ಹೆಚ್ಚುವರಿ ನೀರಿದ್ದಾಗ ಕುಡಿಯಲು ಬೇರೆ ರಾಜ್ಯಗಳಿಗೆ ನೀರು ಕೊಡುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಮಹಾರಾಷ್ಟ್ರದಿಂದ ಕುಡಿಯಲು ಕೃಷ್ಣಾ ಭೀಮಾ ನದಿಗೆ ನೀರು ಬಿಡಿಸಿಕೊಂಡಿದ್ದೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com