ಬೆಂಗಳೂರು: ಗುಡ್ಡದಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ; BBMP ವಿರುದ್ಧ ಸ್ಥಳೀಯರ ಕಿಡಿ
ಬೆಂಗಳೂರು: ನಗರದ ಗುಡ್ಡದಹಳ್ಳಿಯಲ್ಲಿರುವ ಹಲವು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡು ಬರುತ್ತಿದ್ದು, ಈ ಪ್ರದೇಶವೆಲ್ಲ ಗಬ್ಬೆದ್ದು ನಾರುತ್ತಿದೆ. ಕಳೆದ ಮೂರು ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದು, ಬಿಬಿಎಂಪಿ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಕಸದ ಸಮಸ್ಯೆ ದೂರಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಖಾಲಿ ಸ್ಥಳಗಳನ್ನು ಕಸ ಸುರಿಯುವ ಜಾಗವಾಗಿ ಮಾರ್ಪಡಿಸಲಾಗಿದೆ. ದೈನಂದಿನ ತ್ಯಾಜ್ಯವನ್ನು ಅನಿಯಂತ್ರಿತವಾಗಿ ಸುರಿಯಲಾಗುತ್ತಿದೆ. ಇಲ್ಲಿನ ಹಲವು ಸ್ಥಳಗಳಲ್ಲಿ ಒಂದು ನಿಮಿಷ ಕೂಡ ನಿಲ್ಲಲು ಸಾಧ್ಯವಾಗುವುದಿಲ್ಲ. ದುರ್ನಾತ ಬರುತ್ತದೆ. ಅದು ವಾಕರಿಕೆ ಬರುತ್ತದೆ ಎಂದು ಸ್ಥಳದಲ್ಲಿ ರಟ್ಟಿನ ಪೆಟ್ಟಿಗೆ ವ್ಯಾಪಾರ ನಡೆಸುತ್ತಿರುವ ಫಯಾಜುಲ್ಲಾ ಖಾನ್ ಅವರು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಕಸ ಸುರಿಯುವುದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅಸಾಧ್ಯ ಪರಿಸ್ಥಿತಿಗಳಲ್ಲಿ ನಾವು ಕೆಲಸ ಮಾಡುವಂತಾಗಿದೆ ಎಂದು ಮತ್ತೊಬ್ಬ ಅಂಗಡಿ ಮಾಲೀಕ ಅನಿಲ್ ಜೈನ್ ಅವರು ಹೇಳಿದ್ದಾರೆ.
ದ್ವಿಚಕ್ರ ವಾಹನಗಳಲ್ಲಿ ಬರುವ ಜನರು ಕಸವನ್ನು ಎಸೆದು ವೇಗವಾಗಿ ಹೋಗಿ ಬಿಡುತ್ತಾರೆ. ಅವರನ್ನು ತಡೆಯಲು ಯತ್ನಿಸಿದರೆ, ಬೆದರಿಕೆ ಹಾಕುತ್ತಾರೆ. ಇದರಿಂದ ಸ್ಥಳದಲ್ಲಿ ಸಂಚಾರ ವ್ಯವಸ್ಥೆಗಳ ಮೇಲೂ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರತೀನಿತ್ಯ ಕಾಲೇಜಿಗೆ ಹೋಗುವಾಗ ಗುಡ್ಡದಹಳ್ಳಿ ರಸ್ತೆಯನ್ನೇ ಬಳಸುತ್ತೇನೆ. ಸ್ಥಳವು ಕಸಮಯವಾಗಿರುತ್ತದೆ. ಕೆಲವೊಮ್ಮೆ ಆ ರಸ್ತೆ ತಪ್ಪಿಸಲು ಮುಂದಾದರೆ ಕಾಲೇಜಿಗೆ ಹೋಗಲು 30-1 ಗಂಟೆ ಸಮಯ ಬೇಕಾಗುತ್ತದೆ ಎಂದು ವಿದ್ಯಾರ್ಥಿನಿ ಗರೀಮಾ ಜೈನ್ ಅವರು ಹೇಳಿದ್ದಾರೆ.
ಸ್ಥಳದಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, ನಮ್ಮ ಜೀವನೋಪಾಯದ ಮೇಲೂ ನೇರ ಪರಿಣಾಮ ಬೀರುತ್ತಿದೆ. ಈ ಸ್ಥಳದಲ್ಲಿ ಕೆಲಸ ಮಾಡಲು ಕಾರಾಮಿಕರು ನಿರಾಕರಿಸುತ್ತಾರೆ. ಬಿಬಿಎಂಪಿಗೆ ಹಲವಾರು ದೂರುಗಳನ್ನು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಬರುವ ಅಧಿಕಾರಿಗಳು ಕಸವನ್ನು ತೆರವುಗೊಳಿಸುತ್ತಾರೆ. ಆದರೆ, ಅದು ಸಮಸ್ಯೆಗೆ ಕ್ಷಣಿಕ ಪರಿಹಾರವಷ್ಟೇ. ನಂತರ ಮತ್ತೆ ಜನರು ಇಲ್ಲಿಗೆ ಬಂದು ಕಸ ಸುರಿದು ಹೋಗುತ್ತಾರೆಂದು ತಿಳಿಸಿದ್ದಾರೆ.
ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ನಾವು ನಮ್ಮ ಕೈಲಾದಷ್ಟು ಸಮಸ್ಯೆ ದೂರಾಗಿಸಲು ಯತ್ನಿಸುತ್ತಿದ್ದೇವೆ. ಪ್ರತಿದಿನ ತ್ಯಾಜ್ಯವನ್ನು ತೆರವುಗೊಳಿಸುತ್ತೇವೆ, ಆದರೆ ಜನರು ಕಸ ಸುರಿಯುತ್ತಲೇ ಇರುತ್ತಾರೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಬೇರ್ಪಡಿಸುವಂತೆ ಸ್ಥಳೀಯ ನಿವಾಸಿಗಳನ್ನು ಒತ್ತಾಯಿಸಿದ್ದೇವೆ, ಆದರೆ, ಸಾಕಷ್ಟು ಮಂದಿ ಅದನ್ನು ಪಾಲಿಸದೆ, ಕಸ ಸುರಿದು ಹೋಗುತ್ತಾರೆ. ಕಸ ಬೇರ್ಪಡಿಸುವಂತೆ ವಿನಂತಿಸಿದ್ದಕ್ಕಾಗಿ ನಮ್ಮ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ನಿಯಮಗಳ ಜಾರಿ ವ್ಯವಸ್ಥೆ ದುರ್ಬಲವಾಗಿದ್ದು, ಅಪರಾಧಿಗಳು ಸಿಕ್ಕಿಬಿದ್ದರೂ ಅವರ ವಿರುದ್ಧ ಕ್ರಮವಾಗುತ್ತಿಲ್ಲ. ಸಿಕ್ಕಿ ಬೀಳುವವರು ದಂಡ ಕಟ್ಟಲು ನಿರಾಕರಿಸುತ್ತಾರೆ. ಕೆಲವೊಮ್ಮೆ ನಮ್ಮ ಸಿಬ್ಬಂದಿಗಳೇ ದಂಡ ಪಾವತಿಸಬೇಕಾದ ಪರಿಸ್ಥಿತಿಗಳೂ ಬರುತ್ತವೆ. ಏಕೆಂದರೆ, ಒಮ್ಮೆ ಬಿಲ್ ಜನರೇಟ್ ಆದರೆ, ಪಾವತಿಸಲೇಬೇಕಾಗುತ್ತದೆ. ಜನರು ಕಟ್ಟದಿದ್ದಾಗ ನಾವೇ ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಜನರು ಬಿಬಿಎಂಪಿಯ ಮಾತನ್ನು ಕೇಳದಿದ್ದರೆ, ಬಿಬಿಎಂಪಿ ಹೆಚ್ಚು ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕು. ಅಪರಾಧಿಗಳನ್ನು ಹಿಡಿಯಬೇಕು. ಅವರಿಗೆ ದಂಡ ವಿಧಿಸಬೇಕು. ಸ್ವಚ್ಛ ವಾತಾವರಣದಲ್ಲಿ ವಾಸಿಸುವ ನಮ್ಮ ಹಕ್ಕನ್ನು ರಕ್ಷಿಸಬೇಕು ಎಂದು ಫಯಾಜುಲ್ಲಾ ಖಾನ್ ಅವರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ