
ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್ (Drugs) ಜಾಲವನ್ನು ಬಯಲಿಗೆಳೆದಿರುವ ಪೊಲೀಸರು ಡ್ರಗ್ಸ್ ಪೂರೈಸುತ್ತಿದ್ದ ಬೀದರ್ ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ವೈದ್ಯನಾಗಿದ್ದ ಎಂಬ ಅಘಾತಕಾರಿ ಮಾಹಿತಿ ಈಗ ಹೊರಬಂದಿದೆ. ವೈದ್ಯರ ಬಂಧನದ ಬೆನ್ನಲ್ಲೇ, ಜಿಲ್ಲೆಯಲ್ಲಿ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದ ಅನೇಕ ಅಚ್ಚರಿ ಹಾಗೂ ಆತಂಕಕಾರಿ ಮಾಹಿತಿಗಳು ಬಹಿರಂಗವಾಗಿದೆ.
ಬೆಂಗಳೂರಿನ ಕೋಡಿಪಾಳ್ಯ ನಿವಾಸಿಯಾಗಿರುವ ಪ್ರಜ್ವಲ್ ಪೀಣ್ಯಾಸ್ (Prajwal Peenyas) ಬಂಧಿತ ವೈದ್ಯನಾಗಿದ್ದಾನೆ. ಪ್ರಜ್ವಲ್ ಪೀಣ್ಯಾಸ್ ಹಾಗೂ ಇತರ ಪೆಡ್ಲರ್ಗಳು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು ಎಂಬ ಅಘಾತಕಾರಿ ಅಂಶ ಈ ಕಾರ್ಯಾಚರಣೆಯ ಮೂಲಕ ಹೊರಬಿದ್ದಿದೆ.
ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬ ಅಂಶ ಈ ಕಾರ್ಯಾಚರಣೆ ಮೂಲಕ ಲಭ್ಯವಾಗಿದೆ.
ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ, ವೈದ್ಯ ಪ್ರಜ್ವಲ್ ಪೀಣ್ಯಾಸ್ ಕಿಂಗ್ಪಿನ್ ಎಂಬುದು ಗೊತ್ತಾಗಿದೆ.
ಬೆಂಗಳೂರಿನಲ್ಲಿದ್ದ ವೈದ್ಯ ಪ್ರಜ್ವಲ್ ಪೀಣ್ಯಾಸ್, ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದರು. ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಡ್ರಗ್ಸ್ ಪೂರೈಕೆ ಹಿನ್ನಲೆ ದಾಖಲಾಗಿದ್ದ ಪ್ರಕರಣಗಳ ಜಾಡು ಹಿಡಿದಾಗ ಪ್ರಜ್ವಲ್ ಪೀಣ್ಯಾಸ್ ಈ ಜಾಲದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಈವರೆಗೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರಿನಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ 6 ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಮಂಗಳೂರಿಗೆ ಈ ಜಾಲ ಡ್ರಗ್ಸ್ ಪೂರೈಕೆ ಮಾಡುತ್ತಿತ್ತು. ಮಹಾರಾಷ್ಟ್ರಕ್ಕೆ ಸೇರಿದ ಇಬ್ಬರು ಮಧ್ಯಪ್ರದೇಶಕ್ಕೆ ಸೇರಿದ ಒಬ್ಬರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.ಬೀದರ್ ಮೂಲದ ವೈದ್ಯನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
Advertisement