'ನಿಗದಿ ಮಾಡಿರುವ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ಕಠಿಣ ಕ್ರಮ': Autorikshaw ಚಾಲಕರಿಗೆ ಸರ್ಕಾರ ವಾರ್ನಿಂಗ್!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗೆ ನಿಷೇಧ ಹೇರುತ್ತಲೇ ಇತ್ತ ಆಟೋ ಚಾಲಕರ ದುಬಾರಿ ಹಣ ವಸೂಲಿ ಪ್ರಕರಣಗಳೂ ಕೂಡ ಗಣವೀಯವಾಗಿ ಹೆಚ್ಚಾಗುತ್ತಿದೆ. ಏತನ್ಮಧ್ಯೆ ಆಟೋ ಚಾಲಕರಿಗೆ ಸರ್ಕಾರ ಶಾಕ್ ನೀಡಿದೆ.
ಹೌದು.. ಬೆಂಗಳೂರಿನಲ್ಲಿ ಮೀಟರ್ ಹಾಕದೇ ದುಬಾರಿ ಹಣ ಕೇಳುತ್ತಿರುವ ಆಟೋ ಚಾಲಕರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. 2-3 ಕಿ.ಮೀ ದೂರದ ಹತ್ತಿರದ ಸ್ಥಳಗಳಿಗೂ ಆಟೋ ಚಾಲಕರು 200 300 ರೂಗಳನ್ನುಕೇಳುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ.
ಅಲ್ಲದೆ ಮೀಟರ್ ಇದ್ದರೂ ಮೀಟರ್ ಹಾಕದೇ ಬಾಯಿಗೆ ಬಂದ ಹಾಗೆ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇಂತಹ ದೂರುಗಳ ಹಿನ್ನಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಆಟೋ ಚಾಲಕರಿಗೆ ಶಾಕ್ ನೀಡಿದೆ.
ಸರ್ಕಾರದ ನಿಗದಿಪಡಿಸಿರುವ ದರ ವಸೂಲಿ ಮಾಡಿದರೆ ಕಠಿಣ ಕ್ರಮ
ಇನ್ನು ಆಟೋ ಚಾಲಕರ ದುಬಾರಿ ಹಣ ವಸೂಲಿ ಕುರಿತಂತೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದು, ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ ಹೊರಡಿಸಿದ್ದಾರೆ. ಆದೇಶದಲ್ಲಿ 'ಬೆ೦ಗಳೂರು ನಗರದಲ್ಲಿ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಆಪ್ ಆಧಾರಿತ ಆಟೋಗಳಾಗಲಿ ಅಥವಾ ಇನ್ನಾವುದೇ ಮಾದರಿಯ ಆಟೋಗಳಾಗಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
'ಪ್ರಯಾಣಿಕರಿಂದ ನಿಗದಿಕ್ಕಿಂತ ದರಕ್ಕಿಂತ ಹೆಚ್ಚಿನ ದರ ಬೇಡಿಕೆ, ಹೆಚ್ಚಿನ ದರ ನೀಡದಿದ್ದಲ್ಲಿ ಪ್ರಯಾಣವನ್ನು ರದ್ದುಗೊಳಿಸುವುದು ಹಾಗೂ ಅತೀ ಹೆಚ್ಚಿನ ದರ ವಸೂಲು ಮಾಡುತ್ತಿರುವ ಪ್ರಕರಣಗಳ ಬಗ್ಗೆ ದೂರು ಬಂದಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊ೦ಡು ಅ೦ತಹ ಆಟೋಗಳ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ಪ್ರಕರಣ ದಾಖಲಿಸಬೇಕು.
ಉದಾ: ದಿನಾ೦ಕ 18 ನೇ ಜೂನ್ 2025 ರಂದು ರಂದು. ರಾಪಿಡೋ ಆಟೋ ಆಪ್ ಪ್ರತಿ ಕಿ.ಮೀ ರೂ. 100.89, ಅದೇ ಮಾರ್ಗಕ್ಕಾಗಿ ಆಟೋ ಓಲಾ ಅ್ಯಪ್ ಅವರು 4ಕಿ.ಮೀ ದೂರದ ಪ್ರಯಾಣಕ್ಕೆ ರೂ. 384.19 ತೆಗೆದುಕೊ೦ಡಿರುತ್ತಾರೆ. ಸಾರ್ವಜನಿಕರಿಂದ ಈ ರೀತಿಯ ಹಗಲು ದರೋಡೆ ಅಕ್ಷಮ್ಯ, ಕಠಿಣ ಕ್ರಮ ಜರೂರಾಗಿ ಜರುಗಿಸಬೇಕು ಎಂದು ಸೂಚಿಸಿದ್ದಾರೆ.
ಈಗಾಗಲೇ ಬಾಡಿಗೆಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತಾಯಿಸಿದ ಆಟೋ ಚಾಲಕರ ವಿರುದ್ಧ ಪ್ರಕರಣಗಳನ್ನು ಸಾರಿಗೆ ಇಲಾಖೆಯು ದಾಖಲಿಸುತ್ತಿದ್ದಾಗ್ಯೂ ಸಹ, ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಪರಿಣಾಮಕಾರಿಯಾದ ಕಾರ್ಯ ಯೋಜನೆ ರೂಪಿಸಿ ತಪ್ಪಿತಸ್ತ ಆಟೋ ಚಾಲಕರ/ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಸೂಚಿಸಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ