ಕುರ್ಚಿ ಬಿಡಿ, ಕಚೇರಿಗಳಿಂದ ಹೊರಬಂದು ಕೆಲಸ ಮಾಡಿ: ಟ್ರಾಫಿಕ್ DCPಗಳ ಕಾರ್ಯವೈಖರಿಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ

ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣ ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗುವ ಅಪಾಯಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಅಂತಹ ಘಟನೆಗಳು ಸಂಭವಿಸಿದಾಗ ನಾವು ಸುಮ್ಮನಿರಬೇಕೇ?
Home minister Parameshwar.
ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಚಿವ ಪರಮೇಶ್ವರ್.
Updated on

ಬೆಂಗಳೂರು: ನಗರದ ಸಂಚಾರ ಡಿಸಿಪಿಗಳ ಕಾರ್ಯವೈಖರಿಗೆ ಗೃಹ ಸಚಿವ ಪರಮೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಕಚೇರಿಯ ಕುರ್ಚಿ ಬಿಟ್ಟು, ಹೊರಬಂದು ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಂಚಾರ ವಿಭಾಗಕ್ಕೆ ನಿರ್ದಿಷ್ಟ ಡಿಸಿಪಿಗಳನ್ನು ನೇಮಿಸಲಾಗಿದೆ, ಆದರೆ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಗಮನ ಬೇಕು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣ ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗುವ ಅಪಾಯಗಳ ಬಗ್ಗೆ ನಿಮಗೆ ತಿಳಿದಿಲ್ಲವೇ? ಅಂತಹ ಘಟನೆಗಳು ಸಂಭವಿಸಿದಾಗ ನಾವು ಸುಮ್ಮನಿರಬೇಕೇ?" ದ್ವೇಷ ಭಾಷಣವನ್ನು ಹರಡುವ ಮತ್ತು ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ಕಾನೂನುಗಳನ್ನು ಪರಿಚಯಿಸಲಾಗುತ್ತಿದೆ. ಈ ಕಾನೂನುಗಳು ಅಂತಹ ಘಟನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸರಿಗೆ ಅಧಿಕಾರ ನೀಡುತ್ತವೆ.

ಅಪರಾಧ ದರದಲ್ಲಿ ದೇಶದಲ್ಲಿ ಕರ್ನಾಟಕ ಪ್ರಸ್ತುತ 15 ನೇ ಸ್ಥಾನದಲ್ಲಿದೆ. ನಾವು 20ನೇ ಸ್ಥಾನಕ್ಕೆ ಏರುವ ಗುರಿಯನ್ನು ಹೊಂದಿರಬೇಕು. ಅಪರಾಧ ಪ್ರಮಾಣ ಕಡಿಮೆಯಾಗಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸುಲಭವಾಗಿ ಲಭ್ಯವಾಗುತ್ತಿದೆ. ಕೇವಲ ವ್ಯಾಪಾರಿಗಳನ್ನು ಬಂಧಿಸಿದರೆ ಸಾಕಾಗುವುದಿಲ್ಲ. ಅದರ ಮೂಲವನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಮಾದಕ ದ್ರವ್ಯ ಸೇವನೆಯನ್ನು ಸಂಪೂರ್ಣವಾಗಿ ನಿಯಂತ್ರಿಸದಿದ್ದರೆ, ಭವಿಷ್ಯದಲ್ಲಿ ನಾವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದು ಪಿಡುಗಾಗಿ ಮಾರ್ಪಟ್ಟಿದೆ. ಇದನ್ನು ನಿಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಬೇಕೇ? ಯುವಕರು ಬೆಳಗಿನ ಜಾವ 3 ಗಂಟೆಗೆ ವ್ಹೀಲಿಂಗ್ ಮಾಡುತ್ತಾರೆ. ಇದನ್ನು ನಿಯಂತ್ರಿಸದಿದ್ದರೆ, ಇದೇ ಗಂಭೀರ ಸಮಸ್ಯೆಯಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಹೆಚ್ಚಳದ ಬಗ್ಗೆಯೂ ಸಚಿವರು ಕಳವಳ ವ್ಯಕ್ತಪಡಿಸಿದರು.

Home minister Parameshwar.
ರಾಜಣ್ಣಗೆ ಸೆಪ್ಟಂಬರ್ ಕ್ರಾಂತಿಯ ಮಾಹಿತಿ ಇರಬಹುದು, ಇಲ್ಲದಿದ್ದರೆ ಆ ರೀತಿ ಹೇಳುತ್ತಿರಲಿಲ್ಲ: ಜಿ. ಪರಮೇಶ್ವರ್​​​​​​

ಇದನ್ನು ನಿರ್ಲಕ್ಷಿಸಿದರೆ ಮತ್ತು ನಿಯಂತ್ರಣಕ್ಕೆ ತರದಿದ್ದರೆ, ಇದು ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಕ್ರಮ ವಲಸೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಕೋಮು ಹಿಂಸಾಚಾರ ನಿಯಂತ್ರಣ ಪಡೆಯನ್ನು ಒಳ್ಳೆಯ ಉದ್ದೇಶದಿಂದ ಸ್ಥಾಪಿಸಲಾಗಿದೆ. ಅದನ್ನು ಪರಿಣಾಮಕಾರಿಯಾಗಿ ಮಾಡಬೇಕು. ಪೊಲೀಸರು ತೀವ್ರ ಆಸಕ್ತಿ ವಹಿಸಿ ಮುಂಭಾಗದಿಂದ ಮುನ್ನಡೆಸಬೇಕು. ಕೋಮು ಹಿಂಸಾಚಾರವನ್ನು ಪ್ರಚೋದಿಸುವವರಲ್ಲಿ ಭಯ ಇರಬೇಕು ಎಂದರು.

ಪೊಲೀಸರು ಗುಪ್ತಚರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಗುಪ್ತಚರ ಮಾಹಿತಿ ಸಿಗದಿದ್ದರೆ, ಕ್ರಮ ಕೈಗೊಳ್ಳುವುದು ಹೇಗೆ? ನಿರ್ಣಾಯಕ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ಸಂಬಂಧವಿಲ್ಲದ ಕರ್ತವ್ಯಗಳಿಗೆ ವಿಶೇಷ ಶಾಖೆಯ ಸಿಬ್ಬಂದಿಯನ್ನು ಬಳಸುವುದು ಸೂಕ್ತವಲ್ಲ ಎಂದು ಹೇಳಿದರು.

ಇದೇ ವೇಳೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ದೆಹಲಿ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್ ಕಾನ್‌ಸ್ಟೆಬಲ್‌ಗಳು ಬಳಸುವ ಕ್ಯಾಪ್‌ಗಳನ್ನು ಪರಿಶೀಲಿಸಿದರು.

ಇತ್ತೀಚೆಗೆ ರಾಜ್ಯದಲ್ಲಿ ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್‌ಗಳು ಧರಿಸುವ ಸ್ಟೋಚ್ ಹ್ಯಾಟ್ (ಟೋಪಿ) ಬದಲಾವಣೆ ಮಾಡದಂತೆ ಸರ್ಕಾರಕ್ಕೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು.

ಎಲ್ಲ ಪೊಲೀಸರಿಗೂ ಏಕರೂಪ ಟೋಪಿ ಬಳಕೆ ಜಾರಿಗೊಂಡರೆ ಅಧಿಕಾರಿ ಮತ್ತು ಸಿಬ್ಬಂದಿ ಯನ್ನು ಗುರುತಿಸುವುದು ಕಷ್ಟವಾಗಲಿದೆ. ಇದು ಕೆಲ ಪೊಲೀಸರ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಬಹುದು ಎಂದಿದ್ದ ಸಮಿತಿ, ಸ್ಟೋಚ್‌ ಹ್ಯಾಟ್‌ಗೆ ಪರ್ಯಾಯವಾಗಿ ತೆಳುವಾದ ಟೋಪಿ ಬಳಕೆಗೆ ಶಿಫಾರಸು ಮಾಡಿತ್ತು.

ಈ ನಡುವೆ ಎಲ್ಲ ಪೊಲೀಸರು ಏಕರೂಪವಾಗಿ ಸ್ಮಾರ್ಟ್ ಪೀಕ್ ಟೋಪಿ ಬಳಸಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಕಾನ್‌ಸ್ಟೆಬಲ್‌ಗಳಿಗಾಗಿ ಮರುವಿನ್ಯಾಸಗೊಳಿಸಲಾದ ಪೊಲೀಸ್ ಟೋಪಿಗಳ ಕುರಿತು ಗೃಹ ಇಲಾಖೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com