ಇಡ್ಲಿ ತಯಾರಿಕೆಗೆ ಪ್ಲ್ಯಾಸ್ಟಿಕ್ ಶೀಟ್ ಬಳಕೆ: ನಗರದ ಜನಪ್ರಿಯ ಹೋಟೆಲ್ ಗಳಲ್ಲಿ ಬೇಡಿಕೆ ಕುಸಿತ..!

ಗ್ರಾಹಕರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಆದರೆ, ಇಡ್ಲಿ ಆರ್ಡರ್ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ, ಕೆಲವರು ಇಡ್ಲಿ ತಯಾರಿಕೆ ವೇಳೆ ಬಟ್ಟೆ ಬಳಸುತ್ತಿದ್ದೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
ಇಡ್ಲಿ
ಇಡ್ಲಿ
Updated on

ಬೆಂಗಳೂರು: ಬೆಂಗಳೂರಿನ ಹಲವೆಡೆ ಇಡ್ಲಿ ತಯಾರಿಕೆಯಲ್ಲಿ ಹತ್ತಿ ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್‌ಗಳನ್ನು ಬಳಸಲಾಗುತ್ತಿದ್ದು, ಇದರಿಂದ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂಬ ಸುದ್ದಿ ನಗರವಾಸಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ. ಇದರ ಬೆನ್ನಲ್ಲೇ ನಗರದ ಪ್ರಮುಖ ಹೋಟೆಲ್ ಗಳಲ್ಲಿ ಇಡ್ಲಿ ಮಾರಾಟದಲ್ಲಿ ಇಳಿಕೆಯಾಗಿದೆ.

ಮಲ್ಲೇಶ್ವರಂ, ಆರ್‌ಟಿ ನಗರ ಮತ್ತು ಜಯನಗರದಂತಹ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್ ಗಳಲ್ಲಿ ಇಡ್ಲಿ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ಗ್ರಾಹಕರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಆದರೆ, ಇಡ್ಲಿ ಆರ್ಡರ್ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ, ಕೆಲವರು ಇಡ್ಲಿ ತಯಾರಿಕೆ ವೇಳೆ ಬಟ್ಟೆ ಬಳಸುತ್ತಿದ್ದೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

ಇಡ್ಲಿ ತಯಾರಿಗೆ ವೇಳೆ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಮಸ್ಲಿನ್ ಬಟ್ಟೆಯನ್ನು ಮಾತ್ರ ಬಳಕೆ ಮಾಡಲಾಗುತ್ತಿದ್ದು, ನೈರ್ಮಲ್ಯ ಮಾನದಂಡಗಳನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ರೆಸ್ಟೋರೆಂಟ್ ಗಳ ಮಾಲೀಕರು ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ದರ್ಶಿನಿ ಉಪಹಾರ ಮಂದಿರದ ಮಾಲೀಕ ಪ್ರಜ್ವಲ್ ಶೆಟ್ಟಿ ಅವರು ಮಾತನಾಡಿ, ಇಡ್ಲಿಗಳನ್ನು ಒಮ್ಮೆಲೆ ತಯಾರಿಸುವುದಿಲ್ಲ. ಬೇಡಿಕೆಗಳ ಆಧರಿಸಿ ಆಗಾಗ ತಯಾರಿಸಲಾಗುತ್ತದೆ. ಆದರೆ, ಇತ್ತೀಚಿನ ಸುದ್ದಿಗಳ ಬಳಿಕ ಗ್ರಾಹಕರ ಆದ್ಯತೆಗಳು ಬದಲಾಗಿವೆ, ಇದು ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇಡ್ಲಿ
ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳ ಬಳಕೆ: ವರದಿ ಕೇಳಿದ FSSAI, ತನಿಖೆಗೆ ಸೂಚನೆ

ಈ ಮೊದಲು ಜನರು ದೋಸೆ ಮತ್ತು ಇಡ್ಲಿಗಳನ್ನು ಬಹುತೇಕ ಸಮಾನ ಸಂಖ್ಯೆಯಲ್ಲಿ ಆರ್ಡರ್ ಮಾಡುತ್ತಿದ್ದರು, ಆದರೆ ಈಗ ದೋಸೆಗಳನ್ನು ಹೆಚ್ಚಾಗಿ ಆರ್ಡರ್ ಮಾಡುತ್ತಿದ್ದಾರೆ. ದೋಸೆ ತಯಾರಿಕೆ ಕಣ್ಣಿಗೆ ಕಾಣಿಸುವುದರಿಂದ ಅದನ್ನು ಸುರಕ್ಷಿತವೆಂದು ನಂಬುತ್ತಾರೆಂದು ತಿಳಿಸಿದ್ದಾರೆ.

ಅನಾರೋಗ್ಯ ಸಂದರ್ಭದಲ್ಲಿ ಇಡ್ಲಿ ಸೇವನೆ ಇಷ್ಟ ಪಡುತ್ತೇವೆ. ಇಡ್ಲಿ ಹಗು ಹಾಗೂ ಜೀರ್ಣಿಸಿಕೊಳ್ಳಲು ಸುಲಭವಾದ ಪದಾರ್ಥವಾಗಿದೆ. ಆದರೆ, ಇತ್ತೀಚೆಗೆ ಬಂದ ಸುದ್ದಿ ಆಘಾತ ತಂದಿದೆ. ಹೀಗಾಗಿ, ಆಹಾರ ಸೇವನೆ ವೇಳೆ ಹೆಚ್ಚು ಜಾಗರೂಕರಾಗಿರಬೇಕಾಗಿದೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.

ಮತ್ತೊಬ್ಬ ಗ್ರಾಹಕಿ ಮೇಘಾ ಎಂಬುವರು ಮಾತನಾಡಿ, ನೈರ್ಮಲ್ಯ ಮಾನದಂಡಗಳ ಕಾಯ್ದುಕೊಳ್ಳದಿದ್ದರೆ ದೂರು ನೀಡಬಹುದು ಎಂಬ ಮಾಹಿತಿ ಸಾರ್ವಜನಿಕರಿಗೆ ಇದೆ. ಹೀಗಾಗಿ ನಾನು ಹೊರಗೆ ಊಟ ಮಾಡುವಾಗ ಮಾರಾಟಗಾರರ ಬಳಿಕ ಆಹಾರ ತಯಾರಿಕೆ ಬಗ್ಗೆ ಪ್ರಶ್ನೆ ಕೇಳುತ್ತೇನೆಂದು ಹೇಳಿದ್ದಾರೆ.

ಕೇವಲ ಇಡ್ಲಿ ಅಷ್ಟೇ ಅಲ್ಲ, ಪೇಸ್ಟ್ರೀಸ್ ಕೇಕ್ ಗಳ ಸೇವನೆಯನ್ನೂ ಕೂಡ ಜನರು ನಿಯಂತ್ರಿಸಿದ್ದಾರೆ. ಬೀದಿಬದಿ ಆಹಾರ ಪದಾರ್ಥಗಳಲ್ಲಿ ಗ್ರಾಹಕರ ಪ್ರಮುಖ ಆಯ್ಕೆಯಾಗಿದ್ದ ಗೋಬಿ ಹಾಗೂ ಮಸಾಲಾ ಪುರಿ ಮಾರಾಟದಲ್ಲಿಯೂ ಇಳಿಕೆಗಳು ಕಂಡು ಬಂದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com