
ಬೆಂಗಳೂರು: ಬೊಮ್ಮನಹಳ್ಳಿಯ ಹಾಸಿಗೆ ತಯಾರಿಕಾ ಗೋದಾಮಿನಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ 12 ಮಂದಿಯ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮೃತರನ್ನು ತಮಿಳುನಾಡು ಮೂಲದ ಗುರು ಪ್ರಸಾದ್ (30) ಮತ್ತು ರಾಯಚೂರು ಮೂಲದ ಶರಣ ಬಸಪ್ಪ (30) ಎಂದು ಗುರ್ತಿಸಲಾಗಿದೆ.
ಭಾನುವಾರ ಮಧ್ಯಾಹ್ನ 2.30 ರ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಮ್ಮ ಮನೆಗಳಿಗೆ ಹರಡಬಹುದೆಂಬ ಭಯದಿಂದ ನೆರೆಹೊರೆಯಲ್ಲಿ ವಾಸವಾಗಿದ್ದವರು ಬೆಂಕಿಯನ್ನು ನಂದಿಸಲು ಪ್ರಾರಂಭಿಸಿದ್ದಾರೆ. ಬೆಂಕಿ ವೇಗವಾಗಿ ಹರಡಿದ ಹಿನ್ನೆಲೆಯಲ್ಲಿ ಬೆಂಕಿ ನಂದಿಸುತ್ತಿದ್ದವರಿಗೆ ಗಂಭೀರ ಗಾಯಗಳಾಗಿವೆ.
ಘಟನೆ ಸಂಬಂಧ ಗಾಯಗೊಂಡಿರುವ ಎನ್ಜಿಆರ್ ಲೇಔಟ್ ನಿವಾಸಿ 33 ವರ್ಷದ ವಿಜಯ್ ಕುಮಾರ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಗೋದಾಮಿನ ಮಾಲೀಕ ವಾಸಿಂ (35) ವಿರುದ್ಧ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾನು ಇನ್ನೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಅಪಾಯದಿಂದ ಪಾರಾಗಿದ್ದೇನೆ. ಮೃತಪಟ್ಟಿರುವ ಇಬ್ಬರು ಸೇರಿದಂತೆ ಗಾಯಗೊಂಡಿದ್ದವರೆಲ್ಲರೂ ಬೆಂಕಿ ನಂದಿಸಲು ಯತ್ನಿಸಿದ್ದೆವು. ಘಟನೆ ನಡೆದ ದಿನ, ನಾನು ನನ್ನ ಸ್ನೇಹಿತ ತೌಸಿಫ್ ಅಹ್ಮದ್ ಅವರೊಂದಿಗೆ ಸಲೂನ್ಗೆ ಹೋಗುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿತ್ತು. ಸಿಲಿಂಡರ್ ಸ್ಫೋಟದ ಪರಿಣಾಮ ಅಗ್ನಿ ಅವಘಡ ಸಂಭವಿಸಿತ್ತು ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
Advertisement