ಭಾರತ-ಪಾಕ್ ಸಂಘರ್ಷ: ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ದೆಹಲಿಗೆ ಸ್ಥಳಾಂತರ
ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಪರಿಸ್ಥಿತಿ ನಡುವೆ ಶ್ರೀನಗರದಲ್ಲಿ ಸಿಲುಕಿಕೊಂಡಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಭದ್ರತಾ ದೃಷ್ಟಿಯಿಂದಾಗಿ ದೆಹಲಿಗೆ ಸ್ಥಳಾಂತರಿಸಲಾಗಿದೆ.
ಪಾಕಿಸ್ತಾನದ ದಾಳಿ ನಡುವೆ ಉದ್ನಿಗ್ನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಜಮ್ಮುವಿನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿ ಆಗಿದ್ದಾರೆ.
ವಿದ್ಯಾರ್ಥಿಗಳು ಶ್ರೀನಗರದಿಂದ ಜಮ್ಮುವಿಗೆ ಬಸ್ನಲ್ಲಿ ಮತ್ತು ನಂತರ ರೈಲಿನ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದು, ರೈಲ್ವೇ ನಿಲ್ದಾಣಕ್ಕೆ ಬಂದ ನಂತರ ಸಚಿವಾಲಯದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಅವರಿಗೆ ಬೆಂಗಾವಲು ನೀಡಿದ್ದಾರೆ.
ಶ್ರೀನಗರದ ಶೇರ್-ಎ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದೆವು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದಾಗ ನಾವೆಲ್ಲರೂ ಆತಂಕಕ್ಕೊಳಗಾಗಿದ್ದೆವು. ಆದರೆ, ಕೇಂದ್ರದ ತ್ವರಿತ ಪ್ರತಿಕ್ರಿಯೆ ಎಲ್ಲವನ್ನೂ ಬದಲಾಯಿಸಿತು. ವ್ಯವಸ್ಥೆಗಳ ಬಗ್ಗೆ ನಮಗೆ ಮಾಹಿತಿ ನೀಡಲಾಯಿತು. ಕೇಂದ್ರ ಸರ್ಕಾರ ಕಾಳಜಿ ತೋರಿಸಿತು ಎಂದು ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹರ್ಷಿತ್ ಅವರು ಹೇಳಿದ್ದಾರೆ.
ಈ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಮ್ಮ ಪ್ರಧಾನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ತುಂಬಾ ಗಂಭೀರವಾಗಿ ಪರಿಗಣಿಸುವ ದೇಶದ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಸಚಿವಾಲಯದ ಬೆಂಬಲ, ವಿಶೇಷವಾಗಿ ಕುಮಾರಸ್ವಾಮಿ ಅವರ ವೈಯಕ್ತಿಕ ಕಾಳಜಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಟಿಸಿತು ಎಂದು ತಿಳಿಸಿದ್ದಾರೆ.
ಇಂತಹ ಕ್ಷಣಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವವು ಸ್ಪೂರ್ತಿದಾಯಕ ಮತ್ತು ಧೈರ್ಯ ತುಂಬುವಂತಿದೆ. ಅವರ ಸ್ಪಷ್ಟ ಸೂಚನೆಗಳು ಮತ್ತು ಪ್ರತಿಯೊಬ್ಬ ನಾಗರಿಕನ ಕಲ್ಯಾಣಕ್ಕೆ ಆಳವಾದ ವೈಯಕ್ತಿಕ ಬದ್ಧತೆಯು ಇಲಾಖೆಗಳ ನಡುವೆ ತ್ವರಿತ ಸಮನ್ವಯವನ್ನು ಸಾಧ್ಯವಾಗಿಸಿತು. ನಿಖರತೆ ಮತ್ತು ಸಹಾನುಭೂತಿಯಿಂದ ಕಾರ್ಯನಿರ್ವಹಿಸಿದ ನಮ್ಮ ಭದ್ರತಾ ಸಂಸ್ಥೆಗಳು, ರೈಲ್ವೆ ಸಿಬ್ಬಂದಿ ಮತ್ತು ಸಚಿವಾಲಯದ ಅಧಿಕಾರಿಗಳನ್ನು ನಾನು ಶ್ಲಾಘಿಸುತ್ತೇನೆ. ನಮ್ಮ ಜನರ, ವಿಶೇಷವಾಗಿ ದೂರದ ಪ್ರದೇಶಗಳ ವಿದ್ಯಾರ್ಥಿಗಳ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.