
ಬೆಂಗಳೂರು: ಭಾರತದಲ್ಲಿ ಶೇ.60 ರಷ್ಟು ಸಾವುಗಳು ಜೀವನಶೈಲಿ ಸಂಬಂಧಿತ ಕಾಯಿಲೆಗಳಾದ ಹೃದಯಾಘಾತ, ಮಧುಮೇಹ, ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಒಂಟಿತನಕ್ಕೆ ಸಂಬಂಧಿಸಿದ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಂದ ಉಂಟಾಗುತ್ತವೆ.
ಸದ್ದಿಲ್ಲದೆ ಕಾಡುವ ಈ ರೋಗವನ್ನು ಪರಿಹರಿಸದೆ ಯಾವುದೇ ರಾಷ್ಟ್ರವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಸಂಸದ ಹಾಗೂ ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರಾದ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ವತಿಯಿಂದ (FKCCI) ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ನ್ನು ಕೈಗಾರಿಕಾ ಬೆಳವಣಿಗೆಗೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ, ನೀರಿನ ಸುರಕ್ಷತೆ ಮತ್ತು ಪರಿಸರ ಸುಸ್ಥಿರತೆಗೂ ಬಳಸಿಕೊಳ್ಳಬೇಕು ಎಂದು ಡಾ. ಮಂಜುನಾಥ್ ಒತ್ತಿ ಹೇಳಿದರು.
“ಶುದ್ಧ ಗಾಳಿ, ಶುದ್ಧ ನೀರು, ಕಲಬೆರಕೆಯಿಲ್ಲದ ಆಹಾರ ಮತ್ತು ಶುದ್ಧ ಮನಸ್ಸು ಆರೋಗ್ಯದ ನಿಜವಾದ ಮೂಲಾಧಾರಗಳಾಗಿವೆ. ಶಸ್ತ್ರಚಿಕಿತ್ಸೆಯಲ್ಲಿ ರೊಬೊಟಿಕ್ಸ್ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಸಂಶೋಧನೆ, ಪ್ರಗತಿಗಳು ರೋಗಿಗಳಿಗೆ ಚಿಕಿತ್ಸೆ ನೀಡಬಹುದು, ಆದರೆ ರೋಗವನ್ನು ತಡೆಗಟ್ಟಲು ಉತ್ತಮ ನಗರ ಯೋಜನೆ, ಮಾಲಿನ್ಯ ನಿಯಂತ್ರಣ ಮತ್ತು ಸುಸ್ಥಿರ ಎಂಜಿನಿಯರಿಂಗ್ ಅವಶ್ಯಕತೆಯಿದೆ" ಎಂದು ಅವರು ಹೇಳಿದರು.
ಭಾರತದಲ್ಲಿ ಪ್ರತಿ ವರ್ಷ ಧೂಮಪಾನದಿಂದ 14 ಲಕ್ಷ ಜನರು ಮತ್ತು ವಾಯು ಮಾಲಿನ್ಯದಿಂದ ವರ್ಷಕ್ಕೆ 22 ಲಕ್ಷ ಜನರು ಮೃತಪಡುತ್ತಿದ್ದಾರೆ. ಈ ಎರಡು ಅಂಶಗಳು ನಮ್ಮ ಇಡೀ ಆರೋಗ್ಯ ವ್ಯವಸ್ಥೆಯ ಪ್ರಯತ್ನಗಳನ್ನು ನಿರರ್ಥಕಗೊಳಿಸುತ್ತಿವೆ ಎಂದರು.
Advertisement