
ಬೆಂಗಳೂರು: ಬೆಂಗಳೂರಿನ ಸೌಲಭ್ಯಗಳ ಬಗ್ಗೆ ಅಸಮಾಧಾನವಿದ್ದರೆ ಕಂಪನಿಗಳು ತೊರೆಯಲು ಸ್ವತಂತ್ರವಾಗಿವೆ. ಆದರೆ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಸಂದರ್ಶನದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ನಗರದ ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನೀಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ' ಎಂದರು.
ಇದೇ ವೇಳೆ ಉದ್ಯಮಿಗಳ ಬೆಂಗಳೂರು ತೊರೆಯುವ ಟ್ವೀಟ್ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, 'ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನ ತಡೆಯಲ್ಲ. ಆದರೆ, ಸರ್ಕಾರಕ್ಕೆ ಬೆದರಿಸಲು, ಬ್ಯಾಕ್ಮೇಲ್ ಮಾಡೋಕೆ ಬರಬೇಡಿ. ಕಂಪನಿಗಳು ತಮ್ಮ ಸ್ಥಳವನ್ನು ಬದಲಾಯಿಸುವ ನಿರ್ಧಾರವು ವ್ಯಾಪಾರ ಸಮಸ್ಯೆಗಳ ಕಾರಣದಿಂದಾಗಿರಬಹುದು.
ಬೆಂಗಳೂರು ನೀಡುವ ಸೌಲಭ್ಯಗಳು ಮತ್ತು ಪ್ರತಿಭೆಗಳಿಂದ ತೃಪ್ತರಾಗದಿದ್ದರೆ ಯಾರಾದರೂ ಸ್ಥಳಾಂತರಗೊಳ್ಳಲು ಸ್ವತಂತ್ರರು. ಆದರೆ, ಅವರು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಸರ್ಕಾರವನ್ನು ಬ್ಲ್ಯಾಕ್ಮೇಲ್ ಮಾಡುವುದು ಕೆಲಸ ಮಾಡುವುದಿಲ್ಲ. ನಾವು ರಾಜ್ಯದ ಜನರಿಗೆ ಸೇವೆ ಸಲ್ಲಿಸಬೇಕು. ಯಾರೂ ಬೆಂಗಳೂರಿನಿಂದ ಹೊರಹೋಗುವುದಿಲ್ಲ. ಇದನ್ನು ದಾಖಲಿಸಿಕೊಳ್ಳಿ ಎಂದರು.
ಅಂತೆಯೇ ಬೆಂಗಳೂರು ಮತ್ತು ನಾವು ಒದಗಿಸುವ ಮೂಲಸೌಕರ್ಯವನ್ನು ಯಾರೂ ಹೊಂದಿಸಲು ಸಾಧ್ಯವಿಲ್ಲ. ಬೆಂಗಳೂರಿಗೆ ಬರುವ ಮೊದಲು, ಅದು ಏನು ನೀಡುತ್ತದೆ ಎಂಬುದನ್ನು ನೋಡಿದರು. ಆ ನಂತರ ನಿರ್ಧಾರ ತೆಗೆದುಕೊಂಡರು.
ಬೆಂಗಳೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ 112 ಕಿ.ಮೀ. ಫ್ಲೈಓವರ್ಗಳು ಮತ್ತು 44 ಕಿ.ಮೀ.ಗಿಂತ ಹೆಚ್ಚು ಎತ್ತರದ ಡಬಲ್ ಡೆಕ್ಕರ್ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಕೆಲಸ ಶೀಘ್ರದಲ್ಲಿಯೇ ಮುಕ್ತಾಯವಾಗಲಿವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ ಮತ್ತು ಪ್ರತಿದಿನ ನೂರಾರು ಕಂಪನಿಗಳು ಇಲ್ಲಿಗೆ ಬರುತ್ತಿವೆ ಎಂದು ಹೇಳಿದರು.
ನವೆಂಬರ್ ಗಡುವು
ನಾನು ಅಧಿಕಾರಿಗಳಿಗೆ ಬದ್ಧತೆಯಿಂದ ಕೆಲಸ ಮಾಡಿ ಸಮಸ್ಯೆ ಬಗೆ ಹರಿಸಲು ತಿಳಿಸಿದ್ದೇನೆ. ಹಣ ಬಿಡುಗಡೆಯಾಗಿದೆ. ಗುತ್ತಿಗೆದಾರರು ಕೆಲಸ ಕೈಗೊಂಡಿದ್ದಾರೆ. ಬೆಂಗಳೂರಿನ ಸ್ವಚ್ಛತೆ ಮತ್ತು ಗುಂಡಿಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ " ಎಂದು ಭರವಸೆ ನೀಡಿದ್ದಾರೆ.
ವ್ಯಾಪಕ ಸದ್ದು ಮಾಡಿದ್ದ ಉದ್ಯಮಿ ಟ್ವೀಟ್
ಗುಂಡಿ ಸಮಸ್ಯೆ, ಮೂಲಸೌಕರ್ಯಗಳ ಕೊರತೆಯಿಂದ ಬೆಂಗಳೂರಿನಿಂದ ಹೊರ ಹೋಗುತ್ತೇವೆ ಎಂದು ಬ್ಲಾಕ್ಬಕ್ ಕಂಪನಿ ಸಿಇಒ ರಾಜೇಶ್ ಯಬಾಜಿ ಟ್ವೀಟ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಲವು ಉದ್ಯಮಿಗಳು ನಗರದ ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡಬೇಕು ಎಂದು ಸರ್ಕಾರ, ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
Advertisement