

ಬೆಂಗಳೂರು: ನಗರದಲ್ಲಿ ಶನಿವಾರ ನಡೆಯುತ್ತಿದ್ದ ಹಾಸ್ಯ ಕಾರ್ಯಕ್ರಮದ ವೇಳೆ ಅಹಿತಕರ ಘಟನೆಯೊಂದು ನಡೆದಿದೆ. ಹೈದರಾಬಾದ್ ಮೂಲದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಶರತ್ ಅವರ ಅವರ ಕಾರ್ಯಕ್ರಮಕ್ಕೆ ತೆಲುಗು ದೇಶಂ ಪಕ್ಷದ ಬೆಂಬಲಿಗರು ಅಡ್ಡಿಪಡಿಸಿದ ಘಟನೆ ನಡೆದಿದೆ.
ಈ ಘಟನೆ ಕೊರಮಂಗಲದಲ್ಲಿರುವ ಕಾಮಿಡಿ ಕ್ಲಬ್ನಲ್ಲಿ ನಡೆದಿದೆ. ಶನಿವಾರ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ, ಕೆಲವರು ಪ್ರೇಕ್ಷಕರಂತೆ ಒಳನುಗ್ಗಿ, ಪ್ರದರ್ಶನ ಆರಂಭವಾದ ಬಳಿಕ ವೇದಿಕೆಯತ್ತ ತೆರಳಿ ಕಾಮಿಡಿಯನ್ನ್ನು ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.
ಮೊದಲು ಅಭಿಮಾನಿಯಂತೆ ವರ್ತಿಸಿದ ವ್ಯಕ್ತಿ, ನಂತರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಅವರ ಪುತ್ರ, ಸಚಿವ ನಾರಾ ಲೋಕೇಶ್ ಕುರಿತು ಮಾಡಿದ್ದ ಹಾಸ್ಯಕ್ಕೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾನೆಂದು ತಿಳಿದುಬಂದಿದೆ.
ಇದಕ್ಕೆ ಕಾಮಿಡಿಯನ್ ಹಿಂದೆಯೇ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದರೂ, ಇನ್ನೂ ಕೆಲವು ಮಂದಿ ವೇದಿಕೆಗೆ ಬಂದು ಒತ್ತಡ ತರುವ ಪ್ರಯತ್ನ ಮಾಡಿದ್ದಾರೆ.
ಪರಿಸ್ಥಿತಿ ಗಂಭೀರವಾಗಬಹುದು ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಶರತ್ ಅವರು ಮತ್ತೆ ಕ್ಷಮೆ ಕೇಳಿದ್ದಾರೆ. ಆದರೆ, ಚಂದ್ರಬಾಬು ನಾಯ್ಡು ಮತ್ತು ಲೋಕೇಶ್ ಪರ ಘೋಷಣೆಗಳನ್ನು ಕೂಗುವಂತಹ ಆಗ್ರಹವನ್ನು ಅವರು ನಿರಾಕರಿಸಿದ್ದಾರ. ನಾನು ಕೇವಲ ಒಬ್ಬರ ಬಗ್ಗೆ ಅಲ್ಲ, ವಿರೋಧ ಪಕ್ಷವಾದ ವೈಎಸ್ಆರ್ ಕಾಂಗ್ರೆಸ್ ಬಗ್ಗೆಯೂ ಹಾಸ್ಯ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕೊನೆಗೆ "ಇದು ನಿನಗೆ ಕೊನೆಯ ಎಚ್ಚರಿಕೆ" ಎಂದು ಗುಂಪು ಬೆದರಿಕೆ ಹಾಕಿ ಅಲ್ಲಿಂದ ನಿರ್ಗಮಿಸಿದೆ.
ಆಂಧ್ರಪ್ರದೇಶದ ಆಡಳಿತಾರೂಢ ನಾಯಕರ ಬಗ್ಗೆ ಹಾಸ್ಯ ಮಾಡಿದ ಕಾರಣಕ್ಕೆ ಕಲಾವಿದರು ಬೆದರಿಕೆ ಎದುರಿಸುತ್ತಿರುವ ಮೂರನೇ ಘಟನೆ ಇದಾಗಿದೆ. ಇದಕ್ಕೂ ಮೊದಲು ಕಾಮಿಡಿಯನ್ಗಳಾದ ಅನುದೀಪ್ ಕಾಟಿಕಲ ಮತ್ತು ರಫೀಕ್ ಮೊಹಮ್ಮದ್ ಅವರನ್ನು ಇದೇ ರೀತಿಯ ಕಾರಣಕ್ಕೆ ಆಂಧ್ರ ಪೊಲೀಸರು ಬಂಧಿಸಿದ್ದರು.
Advertisement