ಮೊಹಮ್ಮದ್‌ ನಲಪಾಡ್‌ ಎರಡನೇ ವಿವಾಹ: ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ!

ಆಗಸ್ಟ್‌ 15ರಿಂದ 20ರವರೆಗೆ ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್‌ ಕುಟುಂಬಸ್ಥರ ಒಡೆತನದ ಕೂರ್ಗ್‌ ವೈಲ್ಡರ್‌ನೆಟ್‌ ರೆಸಾರ್ಟ್‌ನಲ್ಲಿ ಮದುವೆ ಸಂಭ್ರಮ ನಡೆಯಲಿದೆ.
Mohammed Nalapad's second marriage
ಮಹಮದ್ ನಲಪಾಡ್
Updated on

ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರ ಎರಡನೇ ವಿವಾಹ ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ವೇದಿಕೆ ಸಿದ್ದವಾಗಿದೆ.

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌ ಎರಡನೇ ವಿವಾಹ ನಡೆಯುತ್ತಿದ್ದು, ಆಗಸ್ಟ್‌ 15ರಿಂದ 20ರವರೆಗೆ ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್‌ ಕುಟುಂಬಸ್ಥರ ಒಡೆತನದ ಕೂರ್ಗ್‌ ವೈಲ್ಡರ್‌ನೆಟ್‌ ರೆಸಾರ್ಟ್‌ನಲ್ಲಿ ಮದುವೆ ಸಂಭ್ರಮ ನಡೆಯಲಿದೆ.

ಆಗಸ್ಟ್‌ 16ರಂದು ಮಧ್ಯಾಹ್ನ 12 ಗಂಟೆಗೆ ನಿಕಾಹ್‌ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇರಳ ಮುಖ್ಯಮಂತ್ರಿ ಸತೀಶನ್‌, ನಟರಾದ ಸುದೀಪ್‌, ಯಶ್‌ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

Mohammed Nalapad's second marriage
ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

2017ರಲ್ಲಿ ಮೊದಲ ಮದುವೆ

2017ರಲ್ಲಿ ಸಮ್ರೀನ್ ಸೇಲಂ ಅವರನ್ನು ವಿವಾಹವಾಗಿದ್ದ ಅವರು ಇದೀಗ ಎರಡನೇ ವಿವಾಹವಾಗುತ್ತಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಐ. ಮುನೀರ್‌ ಅಹಮ್ಮದ್‌ ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್‌ ವಿವಾಹವಾಗಲಿದ್ದಾರೆ.

ಯಾರು ಮುನೀರ್‌ ಅಹಮ್ಮದ್‌?

ಮುನೀರ್‌ ಅಹಮ್ಮದ್‌ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಬಿ.ಎ. ಹಸನಬ್ಬ ಅವರ ಸಹೋದರಿ ಪುತ್ರ. ಮುನೀರ್‌ ಅಹಮ್ಮದ್‌ ಮತ್ತು ಎನ್‌.ಎ. ಹ್ಯಾರಿಸ್‌ ಕಳೆದ 20 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಮಲಿಹಾ ಫಾತಿಮಾ ಕಾನೂನು ವ್ಯಾಸಂಗ ಮಾಡಿದ್ದು, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಈ ವಿವಾಹ ನಿಶ್ಚಯವಾಗಿದೆ.

Mohammed Nalapad's second marriage
ವಾಲ್ಮೀಕಿ ನಿಗಮ ಹಗರಣ; ಸಚಿವ ಸಂಪುಟಕ್ಕೆ ನಾಗೇಂದ್ರ ಮರುಸೇರ್ಪಡೆ; 'ಕೈ' ಪಾಳಯಕ್ಕೆ ಹೊಸ ಸಂಕಷ್ಟ!

ಆಗಸ್ಟ್‌ 16ರಂದು ನಡೆಯಲಿರುವ ನಿಕಾಹ್‌ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಸದಸ್ಯರು ಹಾಗೂ ಕೆಲವೇ ಕೆಲವು ಆಹ್ವಾನಿತ ಗಣ್ಯರು ಭಾಗವಹಿಸಲಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್‌. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅವರಿಗೆ ಆಹ್ವಾನ ನೀಡಲಾಗಿದೆ.

ಆಗಸ್ಟ್‌ 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶ ಇರಲಿದೆ. ಐದು ದಿನಗಳ ಮದುವೆ ಸಂಭ್ರಮಕ್ಕಾಗಿ ನಲಪಾಡ್‌ ಮತ್ತು ಮಲಿಹಾ ಫಾತಿಮಾ ಅವರ ಕುಟುಂಬಸ್ಥರು ರೆಸಾರ್ಟ್‌ನಲ್ಲಿ ತಂಗಲಿದ್ದು, ಈ ಅವಧಿಗೆ 104 ಕೊಠಡಿಗಳನ್ನು ಬುಕ್‌ ಮಾಡಲಾಗಿದೆ. ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಸಾರ್ವಜನಿಕರಿಗೆ ರೆಸಾರ್ಟ್‌ ಪ್ರವೇಶವನ್ನು ನಿರ್ಬಂಧಿಸಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com