

ಬೆಂಗಳೂರು: ಪತ್ನಿ ಮೇಲೆ ಐದು ಲೀಟರ್ ಪೇಂಟ್ ಥಿನ್ನರ್ ಸುರಿದ ಪತಿಯೊಬ್ಬ ಬೆಂಕಿ ಹಚ್ಚಿ, ಹತ್ಯೆ ಮಾಡಲು ಯತ್ನಿಸಿರುವ ಘಟನೆಯೊಂದು ಸೂರ್ಯನಗರ ಪೊಲೀಸ್ ವ್ಯಾಪ್ತಿಯ ಚಂದಾಪುರ ವೃತ್ತದ ಬಳಿ ಸೋಮವಾರ ನಡೆದಿದೆ.
ಸಂತ್ರಸ್ತ ಮಹಿಳೆಯನ್ನು ನೇಪಾಳ ಮೂಲದ ಗಂಗಾ ಕುಮಾರಿ (29) ಎಂದು ಗುರ್ತಿಸಲಾಗಿದೆ. ಪತಿ ಬೆಂಕಿ ಹಚ್ಚುತ್ತಿದ್ದಂತೆಯೇ ಗಂಗಾ ಅವರು ಮನೆಯಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ನೀರಿನಿಂದ ಬೆಂಕಿ ನಂದಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಆಕೆಯ ನೆರವಿಗೆ ಬಂದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿಯನ್ನು ಮಹೇಶ್ ಬಹದ್ದೂರ್ ಎಂದು ಗುರ್ತಿಸಲಾಗಿದ್ದು, ಈತ ಮದ್ಯವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗುತ್ತಿದೆ.
ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದು, ಈತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ದಂಪತಿಗಳು 10 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಕುಮಾರಿಯ ಇಬ್ಬರು ಮಕ್ಕಳು ನೇಪಾಳದಲ್ಲಿದ್ದಾರೆ.