

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ದಂಡ ರಹಿತವಾಗಿ ಫೆ.1 ರಿಂದ ಫೆ. 28 ರವರೆಗೆ 2026-27 ನೇ ಸಾಲಿನ ಉದ್ದಿಮೆ ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಲಾಗಿದೆ. ಇಲ್ಲವಾದರೆ ಶುಲ್ಕದ ಶೇಕಡಾ 100 ರಷ್ಟು ದಂಡ ಪಾವತಿ ಮಾಡಿ ಲೈಸೆನ್ಸ್ ನವೀಕರಣ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಜಿಬಿಎ ಆಯುಕ್ತ ಆದೇಶ ಹೊರಡಿಸಿದ್ದಾರೆ.
ಉದ್ದಿಮೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ವರ್ಷಗಳ ಅವಧಿಗೆ ನವೀಕರಣ ಮಾಡಿಸಿಕೊಳ್ಳಬೇಕು. ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳಬೇಕು. ಆನ್ಲೈನ್ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕ್ನಲ್ಲಿ ಪಾವತಿಸಿಕೊಳ್ಳಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚಿಸಿದ್ದಾರೆ.
ದಿನಾಂಕ 01-03-2026 ರಿಂದ 31-03-2026 ರವರೆಗೆ ಪರವಾನಿಗೆ ನವೀಕರಣ ಶುಲ್ಕದ ಶೇಕಡಾ 25 ರಷ್ಟು ದಂಡ ಮೊತ್ತದೊಂದಿಗೆ ಲೈಸೆನ್ಸ್ ಪರವಾನಗಿ ನವೀಕರಿಸಬಹುದು.
ದಿ 01-04-2026 ರಿಂದ ಉದ್ದಿಮೆ ಪರವಾನಿಗೆ ಶುಲ್ಕದ ಶೇಕಡಾ 100% ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಲು ಉದ್ದಿಮೆದಾರರಿಗೆ ಎಚ್ಚರಿಕೆ ನೀಡಿದೆ.
ವಸತಿ ಪ್ರದೇಶದಲ್ಲಿ 40 ಅಡಿ ಅಗಲಕ್ಕಿಂತ ಕಡಿಮೆ ಇರುವ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಪರವಾನಿಗೆಯನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸುವ ಅಧಿಕಾರ ಅಧಿಕಾರಿಗಳಿಗೆ ನೀಡಲಾಗಿದೆ.
ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಲ್ಲಿ ಪೂರ್ಣ ಅಥವಾ ಭಾಗಶಃ ಭಾಗದಲ್ಲಿಉದ್ದಿಮೆ ನಡೆಸುತ್ತಿರುವ ದೂರುಗಳಿದ್ದರೆ, ವಾಹನ ನಿಲುಗಡೆ ಪ್ರದೇಶ ಅಥವಾ ರೂಫ್ ಟಾಪ್ಗಳಲ್ಲಿಉದ್ದಿಮೆ ನಡೆಸುತ್ತಿದ್ದರೆ ಪರವಾನಗಿ ನವೀಕರಣ ತಡೆಹಿಡಿದು, ಹಿಂಬರಹದೊಂದಿಗೆ ತಿರಸ್ಕರಿಸಬೇಕು ಎಂದು ಸೂಚನೆ ನೀಡಲಾಗಿದೆ. ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
100 ಕೆ.ಜಿ.ಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿ ಮಾಡುತ್ತಿರುವ ಉದ್ದಿಮೆಗಳಿಂದ ಮೂಲ ಸ್ಥಳದಲ್ಲಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬೇಕು. ಎಂಪ್ಯಾನಲ್ಡ್ ವೆಂಡರ್ಗಳಿಗೆ ಕಸ ನೀಡುತ್ತಿದ್ದರೆ, ಆ ಸಂಬಂಧ ಮಾಡಿಕೊಂಡಿರುವ ಒಡಂಬಡಿಕೆ ಪ್ರತಿ ಸಲ್ಲಿಸಬೇಕು.
ಕಲ್ಯಾಣ ಮಂಟಪ ಹೋಟೆಲ್ ರೆಸ್ಟೋರೆಂಟ್ ಮತ್ತು ಆಹಾರ ಸರಬರಾಜು ಮಾಡುವ ಉದ್ದಿಮೆಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಕುರಿತು ಲಿಖಿತ ಹೇಳಿಕೆ ಪಡೆದುಕೊಂಡು ವ್ಯಾಪಾರದ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲು ಸೂಚಿಸಿ ಲೈಸೆನ್ಸ್ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಜಿಬಿಎ ಅಡಿಯಲ್ಲಿ ಬರುವ ಐದು ನಗರ ನಿಗಮಗಳ ಆರೋಗ್ಯ ಅಧಿಕಾರಿಗಳು, ಉಪ ಆರೋಗ್ಯ ಅಧಿಕಾರಿಗಳು ಮತ್ತು ಆರೋಗ್ಯ ವೈದ್ಯಕೀಯ ಅಧಿಕಾರಿಗಳಿಗೆ 2026-27ನೇ ಸಾಲಿಗೆ ನವೀಕರಣ ಪ್ರಕ್ರಿಯೆಯನ್ನು ಅಸ್ಪಷ್ಟತೆಯಿಲ್ಲದೆ ಕಾರ್ಯಗತಗೊಳಿಸಲು ಸೂಚಿಸಲಾಗಿದೆ.
ಜಿಬಿಎ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಏಳು ಸಾವಿರ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಆಸ್ತಿ ತೆರಿಗೆ, ಸೆಸ್, ಬಡ್ಡಿ, ದಂಡ ಹಾಗೂ ಘನತ್ಯಾಜ್ಯ ಸೆಸ್, ಬಳಕೆದಾರರ ಶುಲ್ಕ ಸೇರಿ ₹437 ಕೋಟಿ ಬಾಕಿ ಉಳಿದಿದೆ. ಈ ಸಂಬಂಧ ಆಸ್ತಿ ಮಾಲೀಕರಿಗೆ ಬೇಡಿಕೆ ನೋಟಿಸ್ ಕಳುಹಿಸಲಾಗಿತ್ತು. ಆದರೂ, ತೆರಿಗೆ ಪಾವತಿಸದೆ ಇರುವುದರಿಂದ, ಮುಂದಿನ ಕ್ರಮವಾಗಿ ಜಪ್ತಿ ಆದೇಶ ಹೊರಡಿಸಲಾಗಿದೆ ಎಂದು ಜಿಬಿಎ ಕಂದಾಯ ವಿಭಾಗದ ಪ್ರಕಟಣೆ ತಿಳಿಸಿದೆ.
ಜಪ್ತಿ ಆದೇಶ ಹೊರಡಿಸಿದ ಬಳಿಕವೂ ತೆರಿಗೆ ಪಾವತಿ ಆಗದಿರುವುದರಿಂದ ಈ ಆಸ್ತಿಗಳನ್ನು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಫೆ.17ರಂದು ಹರಾಜಿಗೆ ದಿನ ನಿಗದಿಪಡಿಸಲಾಗಿದೆ. ಹರಾಜಿಗೆ ಸಂಬಂಧಿಸಿದ ನೋಟಿಸ್ಗಳ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸಂಬಂಧಿತ ಆಸ್ತಿ ಮಾಲೀಕರು ತಕ್ಷಣವೇ https://BBMPTax.karnataka.gov.in ಮೂಲಕ ಆನ್ಲೈನ್ ಪಾವತಿ ಮಾಡಿದಲ್ಲಿ, ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.
Advertisement