

ಬೆಂಗಳೂರು: ಬೆಂಗಳೂರು ಕಸವನ್ನು ಡಂಪ್ ಮಾಡುವ ಡಂಪಿಂಗ್ ಯಾರ್ಡ್ ಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಭರವಸೆ ನೀಡಿದ್ದು, ಇದರೊಂದಿಗೆ ನಗರದ ಕಸದ ಸಮಸ್ಯೆ ದೂರಾದಂತಾಗಿದೆ.
ಯಲಹಂಕ, ಮಹದೇವಪುರ, ಬ್ಯಾಟರಾಯನಪುರ, ದೊಡ್ಡಬಳ್ಳಾಪುರ, ಆನೇಕಲ್,ಯಶವಂತಪುರ ಸೇರಿದಂತೆ ಡಂಪಿಂಗ್ ಯಾರ್ಡ್ ಗಳಿರುವ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 350 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಜಿಬಿಎ ಆಯುಕ್ತರು ಭರವಸೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ, ಕಣ್ಣೂರು, ದೊಡ್ಡಬಳ್ಳಾಪುರ ಡಂಪಿಂಗ್ ಯಾರ್ಡ್ ಗಳಲ್ಲಿ ಕಸ ಸುರಿಯಲು ಕಸದ ಲಾರಿಗಳಿಗೆ ಅನುವು ಮಾಡಿಕೊಡಲಾಗಿದೆ. ಇದರಿಂದ ಬೆಂಗಳೂರಿನ ಕಸದ ಸಮಸ್ಯೆ ದೂರಾದಂತಾಗಿದೆ.
ಯಶವಂತಪುರ, ಬ್ಯಾಟರಾಯಣಪುರ, ಮಹಾದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೆಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ರೂ. 350 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಬಿಎಸ್ಡಬ್ಲ್ಯೂಎಂಎಲ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಿಟ್ಟಗಾನಹಳ್ಳಿ, ಕಣ್ಣೂರು, ಬಿದರಹಳ್ಳಿ, ಬೆಳ್ಳಹಳ್ಳಿ, ಕನ್ನೇಹಳ್ಳಿ, ಸೀಗೇಹಳ್ಳಿ, ಚಿಗುರನಹಳ್ಳಿ, ಚಿಕ್ಕನಾಗಮಂಗಲ, ಹುಲ್ಹಳ್ಳಿ, ಲಕ್ಷ್ಮೀಪುರ ಸೇರಿದಂತೆ ಹಲವು ಗ್ರಾಮ ಹಾಗೂ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ, ವಿದ್ಯುತ್ ಕಂಬಗಳ ಅಳವಡಿಕೆ, ಕೆರೆಗಳ ಅಭಿವೃದ್ಧಿ ಹಾಗೂ ಬೋರ್ವೆಲ್ ತೋಡುವಂತಹ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಗಾಗಿ ಯೆಶವಂತಪುರ, ಬ್ಯಾಟರಾಯಣಪುರ ಮತ್ತು ಮಹಾದೇವಪುರ ಕ್ಷೇತ್ರಗಳಿಗೆ ತಲಾ ರೂ. 90 ಕೋಟಿ, ಆನೆಕಲ್ಗೆ ರೂ. 50 ಕೋಟಿ, ಬೆಂಗಳೂರು ದಕ್ಷಿಣಕ್ಕೆ ರೂ. 20 ಕೋಟಿ ಹಾಗೂ ದೊಡ್ಡಬಳ್ಳಾಪುರಕ್ಕೆ ರೂ. 10 ಕೋಟಿ ಮೀಸಲಿಡಲಾಗಿದೆ. ತಕ್ಷಣ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಕಸ ತ್ಯಾಜ್ಯ ಘಟಕಗಳಿಗೆ ಹೋಗುತ್ತಿದ್ದ 200ಕ್ಕೂ ಹೆಚ್ಚು ಲಾರಿಗಳನ್ನು ಕಣ್ಣೂರು ಮತ್ತು ಬೆಳ್ಳಹಳ್ಳಿಯಲ್ಲಿ ಸ್ಥಳೀಯರು ತಡೆದು ಪ್ರತಿಭಟನೆ ನಡೆಸಿದ್ದರು.
ತಮ್ಮ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ವಿಳಂಬವಾಗಿರುವುದರಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿತ್ತು ಎಂದು ಬೆಳ್ಳಹಳ್ಳಿ ಸಮೀಪದ ಕೊಗಿಲು ಕ್ರಾಸ್ ನಿವಾಸಿ ಹೇಮಂತ್ ಕುಮಾರ್ ಅವರು ಹೇಳಿದ್ದಾರೆ.
ಇದೀಗ ಪ್ರತಿಭಟನಾಕಾರರಿಗೆ ಎಲ್ಲಾ ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿದ್ದು, ರೂ. 350 ಕೋಟಿ ಪ್ಯಾಕೇಜ್ ಘೋಷಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ. ಭರವಸೆ ನೀಡಿರುವ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಕೈಬಿಟ್ಟಿದ್ದೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಮಿಟ್ಟಗಾನಹಳ್ಳಿ, ಬಿದರಹಳ್ಳಿ ಹಾಗೂ ಕಣ್ಣೂರು ನಿವಾಸಿಗಳ ಪ್ರತಿನಿಧಿಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿವೃದ್ಧಿ ಯೋಜನೆಗಳನ್ನು ಶೀಘ್ರ ಜಾರಿಗೆ ತರಲು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಈ ಹಿಂದೆ, ಬೆಂಗಳೂರಿನ ಹೊರವಲಯದಲ್ಲಿ ವಾಸಿಸುವ ಜನರು ಕಸ ಸುರಿಯುವುದನ್ನು ಮತ್ತು ತಮ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಲಕ್ಷಿಸುವುದನ್ನು ವಿರೋಧಿಸಿ ಇದೇ ರೀತಿಯ ಪ್ರತಿಭಟನೆಗಳನ್ನು ನಡೆಸಿದ್ದರು. ಪಾಲಿಕೆ ತಮ್ಮ ಬೇಡಿಕೆಗಳನ್ನು ಈಡೇರಿಸಿದ ನಂತರವೇ ಪ್ರತಿಭಟನೆಯನ್ನು ಕೈಬಿಡಲಾಗಿತ್ತು ಎಂದು ಬಿದರಹಳ್ಳಿಯ ನಿವಾಸಿಯೊಬ್ಬರು ಹೇಳಿದ್ದಾರೆ.
Advertisement