

ಬೆಂಗಳೂರು: ಕೇಂದ್ರ ಸರ್ಕಾರದ PM e-Drive ಯೋಜನೆಯಡಿ ಬೆಂಗಳೂರಿಗೆ ಮಂಜೂರಾಗಿರುವ 4,500 ಎಲೆಕ್ಟ್ರಿಕ್ ಬಸ್ಗಳ ಯೋಜನೆಯನ್ನು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಜನತಾ ದಳ (ಜಾತ್ಯತೀತ) ಆರೋಪಿಸಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕೇಂದ್ರದ ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ 1,505 ಕೋಟಿ ರೂ. ಸಹಾಯಧನದೊಂದಿಗೆ 4,500 ಎಲೆಕ್ಟ್ರಿಕ್ ಬಸ್ಗಳು ಬೆಂಗಳೂರಿಗೆ ಮಂಜೂರಾಗಿದ್ದವು. 2025ರಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ರಾಜ್ಯ ಸರ್ಕಾರ ಇದುವರೆಗೆ ಸಚಿವ ಸಂಪುಟದ ಅನುಮೋದನೆ ನೀಡದೇ ಯೋಜನೆಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದೆ.
ಹೈದರಾಬಾದ್, ಸೂರತ್ ಹಾಗೂ ಅಹಮದಾಬಾದ್ ನಗರಗಳು ಈಗಾಗಲೇ ಕಾರ್ಯಾದೇಶ ನೀಡಿ ಯೋಜನೆ ಅನುಷ್ಠಾನದಲ್ಲಿ ಮುಂದುವರಿದಿವೆ. ಆದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕಡತಗಳನ್ನು ಬಾಕಿ ಇಟ್ಟು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಟೀಕಿಸಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ರಾಜಕೀಯ ದ್ವೇಷದಿಂದ ಯೋಜನೆಗೆ ಅಡ್ಡಿಯಾಗುತ್ತಿದೆ ಎಂದು ಕಿಡಿಕಾರಿದೆ.
ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿರುವ ಜೆಡಿಎಸ್, "ಬೆಂಗಳೂರು ಜನರಿಗೆ ಎಲೆಕ್ಟ್ರಿಕ್ ಬಸ್ಗಳು ಬೇಡವೇ? ಕೇಂದ್ರ ಸರ್ಕಾರ ನೀಡಿರುವ ಅನುದಾನವನ್ನು ಬಳಸಿಕೊಳ್ಳದಿರುವುದಕ್ಕೆ ಕಾರಣವೇನು? ಯೋಜನೆ ಬೇರೆ ರಾಜ್ಯಗಳಿಗೆ ಹೋದರೆ ಅದರ ಹೊಣೆ ಯಾರು?" ಎಂದು ಪ್ರಶ್ನಿಸಿದೆ.
ರಾಜ್ಯ ಸರ್ಕಾರದ ವಿಳಂಬ ಮತ್ತು ನಿರಾಸಕ್ತಿ ನೀತಿಗೆ ಬೆಂಗಳೂರಿನ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.