

ಬೆಂಗಳೂರು: ಉದ್ಯಾನನಗರಿ ಜನರ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ನಮ್ಮ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಎಡವಟ್ಟು ಗಳಿಂದ ಸುದ್ದಿಯಾಗುತ್ತಿದೆ. ಈ ಮಧ್ಯೆ ಮೆಟ್ರೋ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ಪಿಲ್ಲರ್ಗಳ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ವೇಳೆ ಗುತ್ತಿಗೆ ಕಾರ್ಮಿಕರೊಬ್ಬರಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಮೃತರನ್ನು 70 ವರ್ಷದ ಗುರಪ್ಪ ಎಂದು ಗುರುತಿಸಲಾಗಿದೆ.
ನಮ್ಮ ಮೆಟ್ರೋ ಪಿಲ್ಲರ್ ಇಲ್ಯುಮಿನೇಷನ್ ಅಥವಾ ಬೆಳಕಿನ ವ್ಯವಸ್ಥೆ (Pillars Lighting Works) ಕಾಮಗಾರಿಯ ಗುತ್ತಿಗೆಯನ್ನು ‘ಎಂ/ಎಸ್ ಎಂ.ಆರ್. ಎಲೆಕ್ಟ್ರಿಕಲ್ಸ್’ ಸಂಸ್ಥೆ ಪಡೆದುಕೊಂಡಿತ್ತು. ಈ ಸಂಸ್ಥೆಯ ಗುತ್ತಿಗೆ ಕಾರ್ಮಿಕ ಗುರುಪ್ಪ ಇಂದು ಮಧ್ಯಾಹ್ನ ಸುಮಾರು 3:52 ಗಂಟೆಗೆ ಟ್ರಿನಿಟಿ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿರುವ ಪಿಲ್ಲರ್ ಸಂಖ್ಯೆ 153ರ ಸಮೀಪ ನೆಲದಲ್ಲಿ ಅರ್ಥ್ ಪಿಟ್ (Earth Pit) ಕಾಮಗಾರಿ ನಡೆಸುತ್ತಿದ್ದರು.
ಈ ವೇಳೆ ದುರದೃಷ್ಟವಶಾತ್ ಕಾರ್ಮಿಕನು ಲೈವ್ ವಿದ್ಯುತ್ ಸಂಪರ್ಕಕ್ಕೆ ಬಂದಿದ್ದು, ಕೂಡಲೇ ಅವರು ಕುಸಿದು ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡ ಗುರಪ್ಪ ಅವರನ್ನು ತಕ್ಷಣವೇ ಸ್ಥಳದಲ್ಲಿದ್ದವರು ಸಮೀಪದ ಸೇಂಟ್ ಫಿಲೋಮಿನಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಕೊಂಡೊಯ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಪಾಸಣೆ ನಡೆಸಿ ಅಧಿಕೃತವಾಗಿ ಘೋಷಿಸಿದರು.
ಸಮಗ್ರ ತನಿಖೆಗೆ ಬಿಎಂಆರ್ಸಿಎಲ್ ಆದೇಶ
ದುರ್ಘಟನೆಗೆ ನಿಖರವಾದ ಕಾರಣವೇನು ಮತ್ತು ಸುರಕ್ಷತಾ ಕ್ರಮಗಳಲ್ಲಿ ಏನಾದರೂ ಲೋಪಗಳಿದ್ದವೇ ಎಂಬ ಕುರಿತು ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ನಿಖರ ಕಾರಣ ತಿಳಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು, ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ಕಾರ್ಮಿಕನ ಕುಟುಂಬದವರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತೀವ್ರ ಸಂತಾಪ ಸೂಚಿಸಿದೆ.