

ಬೆಂಗಳೂರು: ಖಾಸಗಿ ವಸತಿ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ಶಾಲೆಯ ಪ್ರಾಂಶುಪಾಲೆ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ.
ಪೋಕ್ಸೋ ಪ್ರಕರಣದಲ್ಲಿ ದೇವನಹಳ್ಳಿ ಪೊಲೀಸರು ಪ್ರಾಂಶುಪಾಲೆ, ಅವರ ಪತಿ ಮತ್ತು ಶಿಕ್ಷಕನ ವಿರುದ್ಧ ಪ್ರಕರಣದಲ್ಲಿ ಬಂಧಿಸಿದ್ದಾರೆ. ಆರೋಪಿ ಪ್ರಾಂಶುಪಾಲೆಯ ಪತಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ.
ಖಾಸಗಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಅಕ್ಕ–ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿ ಶಾಲೆಯ ಮಾಲೀಕ ಹಾಗೂ ಪ್ರಾಂಶುಪಾಲೆಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮಾಲೀಕ ಧನಂಜಯ್ ಹಾಗೂ ಪ್ರಾಂಶುಪಾಲೆ ಶೈಲಜಾ ಬಂಧಿತರು. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಘಟನೆ ಬೆಳಕಿಗೆ ಬಂದ ನಂತರ ಶಾಲೆಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಶಾಲೆಯಲ್ಲಿ ಒಟ್ಟು 600 ವಿದ್ಯಾರ್ಥಿಗಳಿದ್ದು, 350 ಕ್ಕೂ ಹೆಚ್ಚು ಹುಡುಗಿಯರು ಇದ್ದಾರೆ.
ಆಗಿದ್ದೇನು?
ಸಂತ್ರಸ್ಥಅಕ್ಕ,ತಂಗಿ ಇಬ್ಬರೂ ವಸತಿಶಾಲೆ ಯಲ್ಲಿ ಓದುತ್ತಿದ್ದರು. ಧನಂಜಯ್ ಈಚೆಗೆ ಅಕ್ಕನನ್ನು ಶಾಲೆಯ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗರ್ಭಧಾರಣೆ ತಪ್ಪಿಸಲು ಆಹಾರದಲ್ಲಿ ಔಷಧಿ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಂಗಿ ಮೇಲೂ ದೌರ್ಜನ್ಯ
ಆರೋಪಿ ಅಷ್ಟಕ್ಕೇ ಸುಮ್ಮನಾಗದೇ ಇದನ್ನು ಪ್ರಶ್ನಿಸಿದ ಬಳಿಕ ಆಕೆಯ ತಂಗಿಯ ಮೇಲೂ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಆದರೆ, ಆಕೆ ಶೌಚಾಲಯದಲ್ಲಿ ಅಡಗಿ ತಪ್ಪಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾಳೆ.
ಬೆದರಿಕೆ ಹಾಕಿದ್ದ ಪ್ರಾಂಶುಪಾಲೆ
ಪ್ರಾಂಶುಪಾಲೆ ಶೈಲಜಾ, ಈ ವಿಷಯವನ್ನು ಯಾರಿಗೂ ತಿಳಿಸದಂತೆ ವಿದ್ಯಾರ್ಥಿನಿಯರಿಗೆ ಬೆದರಿಸಿದ್ದರು. ಅಲ್ಲದೆ ಹೆಚ್ಚಿನ ಅಂಕ, ಉಚಿತ ಶಿಕ್ಷಣದ ಆಮಿಷ ಒಡ್ಡಿದ್ದರು. ವಿಷಯ ಬಹಿರಂಗ ಪಡಿಸಿದರೆ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ದಂಪತಿಗಳು ತಮ್ಮ ಪೋಷಕರಿಗೆ ತಿಳಿಸಬಹುದೆಂಬ ಭಯದಿಂದ ಸಂತ್ರಸ್ತರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.
ಪೋಷಕರಿಗೆ ಮಾಹಿತಿ ನೀಡಿದ ಬಾಲಕಿಯರು
ಘಟನೆ ಬಳಿಕ ಪೋಷಕರಿಗೆ ಮಕ್ಕಳ ಭೇಟಿಗೆ ಅವಕಾಶ ನೀಡಿಲ್ಲ. ದೂರವಾಣಿ ಸಂಪರ್ಕ ಕಡಿತಗೊಳಿಸಲಾಗಿತ್ತು. ಎಂಟು ದಿನಗಳ ಕಾಲ ಬಂಧನದಲ್ಲಿಟ್ಟು ಪ್ರವಾಸಕ್ಕೆ ಕಳುಹಿಸಿದ್ದೇವೆ ಅಥವಾ ಓದುತ್ತಿದ್ದಾರೆ ಎಂಬ ನೆಪ ಹೇಳಲಾಗಿತ್ತು. ಪೋಷಕರು ಒತ್ತಾಯಿಸಿದ ಬಳಿಕ ಕೆಲವೇ ನಿಮಿಷದ ಮಾತುಕತೆಯಲ್ಲಿ ಬಾಲಕಿಯರು ನಡೆದ ಘಟನೆಯನ್ನು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು ಮಲಗುತ್ತಿದ್ದ ವಸತಿ ನಿಲಯದ ಕೊಠಡಿಗೆ ಬೀಗ ಅಥವಾ ಬೋಲ್ಟ್ ವ್ಯವಸ್ಥೆ ಇರಲಿಲ್ಲ. ಕೃತ್ಯ ನಡೆದ ದಿನ ವಾರ್ಡನ್ನನ್ನು ಮನೆಗೆ ಕಳುಹಿಸಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿ ನಿಯರ ಸುರಕ್ಷತೆಗೆ ಜಿಲ್ಲಾಡಳಿತ ಕ್ರಮ ವಹಿಸಿದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆ ನಡೆಸಲು ಅನುಮತಿಯೇ ಇಲ್ಲ!
ಇನ್ನು ಮತ್ತೊಂದು ತಿರುವಿನಲ್ಲಿ ಮಾಲೀಕ ಧನಂಜಯ್, ಬಾಲಕರ ಹಾಸ್ಟೆಲ್ಗೆ ಮಾತ್ರ ಅನುಮತಿ ಪಡೆದಿದ್ದರೂ, ಬಾಲಕಿಯರ ಹಾಸ್ಟೆಲ್ ಅನ್ನು ಅನಧಿಕೃತವಾಗಿ ನಡೆಸುತ್ತಿದ್ದ ಎನ್ನಲಾಗಿದೆ. ಲೈಸೆನ್ಸ್ ನವೀಕರಿಸದೇ ಹಾಗೂ ಪರವಾನಗಿ ಇಲ್ಲದೆ ವಸತಿ ಶಾಲೆ ನಡೆಸುತ್ತಿದ್ದ ಧನಂಜಯ್ ಗೆ ಆತನ ಪತ್ನಿ ಶೈಲಜಾ ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕ ಮತ್ತು ಬಾಲಕಿಯರ ವಸತಿ ಶಾಲೆ ನಡೆಸುತ್ತಿದ್ದ ಧನಂಜಯ್ ಕೇವಲ ಬಾಲಕರ ಶಾಲೆಗೆ ಮಾತ್ರ ಅನುಮತಿ ಪಡೆದಿದ್ದು, ಬಾಲಕಿಯರ ವಸತಿ ಶಾಲೆ ನಡೆಸಲು ಪರವಾನಗಿ ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದಲ್ಲದೆ ಕಳೆದ ವರ್ಷದಿಂದ ಬಾಲಕರ ಹಾಸ್ಟೆಲ್ ಲೈಸನ್ಸ್ ನವೀಕರಣವೂ ಮಾಡಿಸದ ಆಡಳಿತ ಮಂಡಳಿ ವಸತಿ ಶಾಲೆ ನಡೆಸುತ್ತಿತ್ತು ಎನ್ನಲಾಗಿದೆ.
ಶಿಕ್ಷಣ ಇಲಾಖೆ ಸ್ಪಷ್ಟನೆ
ದೌರ್ಜನ್ಯದ ಘಟನೆ ಬಹಿರಂಗವಾದ ನಂತರವೇ ಹಾಸ್ಟೆಲ್ ಕಾರ್ಯಾಚರಣೆ ಕುರಿತು ಗಮನಕ್ಕೆ ಬಂದಿದೆ ಎಂದು ಶಿಕ್ಷಣ ಇಲಾಖೆ ಹೇಳಿದ್ದು, ವಸತಿ ಶಾಲೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಅನುಮತಿ ಅಗತ್ಯವೆಂದು ಡಿಡಿಪಿಐ ಸ್ಪಷ್ಟಪಡಿಸಿದ್ದಾರೆ. ಖಾಸಗಿ ಶಾಲೆಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ. ಇದರಿಂದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ನಿರ್ಲಕ್ಷ್ಯ ಬಯಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.
Advertisement