

ಬೆಂಗಳೂರು: ರಸ್ತೆ ಅಪಘಾತದಲ್ಲಿ 4 ವರ್ಷದ ಬಾಲಕಿ ತಾಯಿಯ ಕಣ್ಣೆದುರೇ ಮೃತಪಟ್ಟ ಹೃದಯ ವಿದ್ರಾವಕ ಘಟನೆಯೊಂದು ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪ್ರದೇಶದ ಹನುಮಂತಗೌಡನಪಾಳ್ಯದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ದಾಸನಪುರ ನಿವಾಸಿಗಳಾದ ರಾಜೇಂದ್ರ (35) ಮತ್ತು ಲಾವಣ್ಯ (30) ಅವರ ಪುತ್ರಿ ನಿಶಿಕಾ (4) ಮೃತಪಟ್ಟ ಬಾಲಕಿಯಾಗಿದ್ದಾಳೆ.
ಲಾವಣ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಆದಕಮಾರನಹಳ್ಳಿಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಿಶಿಕಾ ತಾಯಿಯ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಳು, ಮತ್ತೊಂದು ಮಗುವನ್ನು ಲಾವಣ್ಯ ತೋಳುಗಳಲ್ಲಿ ಹೊತ್ತುಕೊಂಡು ರಸ್ತೆಯಲ್ಲಿ ನಡೆದು ಸಾಗುತ್ತಿದ್ದರು. ಈ ವೇಳೆ ಅತಿವೇಗದಲ್ಲಿ ಬಂದ ಸರಕು ವಾಹನ ಏಕಾಏಕಿ ಬಾಲಕಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ನಿಶಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ನಾನು ನನ್ನ ಮಗಳ ಕೈ ಹಿಡಿದೇ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಕಣ್ಣೆದುರೇ ಅವಳು ಮೃತಪಟ್ಟಳು ಎಂದು ತಾಯಿ ಲಾವಣ್ಯ ಅವರು ಕಣ್ಣೀರಿಟ್ಟಿದ್ದಾರೆ.
ನಿಶಿಕಾ ಅಂಗನವಾಡಿಗೆ ಹೋಗುತ್ತಿದ್ದು, ಕುಟುಂಬದ ಹಿರಿಯ ಮಗಳಾಗಿದ್ದಳು. ಘಟನೆ ಬಳಿಕ ಸ್ಥಳೀಯರು ಆಕ್ರೋಶಗೊಂಡು ಲಾರಿಯ ಗಾಜು ಒಡೆದು ಚಾಲಕನ ಮೇಲೆ ಹಲ್ಲೆ ನಡೆಸಿದರು.
ಮದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ವಶಕ್ಕೆ ಪಡೆದು, MH-04-HY-2203 ಸಂಖ್ಯೆಯ ಸರಕು ವಾಹನವನ್ನು ಜಪ್ತಿ ಮಾಡಿದ್ದಾರೆ. ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Advertisement