

ಬೆಂಗಳೂರು: ತನ್ನ ಅನುಮತಿ ಪಡೆಯದೆ ಬೈಕ್ ತೆಗೆದುಕೊಂಡು ಹೋದ ಎಂಬ ಸಿಟ್ಟಿಗೆ ತಂದೆಯೊಬ್ಬ ತನ್ನ ಮಗನ ಮೇಲೆಯೇ ಪೆಟ್ರೋಲ್ ಎರಚಿದ್ದು, ಈ ವೇಳೆ ಬೆಂಕಿ ತಗುಲಿ ಇಬ್ಬರಿಗೂ ಗಾಯವಾಗಿರುವ ಘಟನೆಯೊಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿಪುರದಲ್ಲಿ ನಡೆದಿದೆ.
ಮಗ ಮಲ್ಲಿಕಾರ್ಜುನ್ (19) ಗಂಭೀರವಾಗಿ ಗಾಯಗೊಂಡರೆ, ತಂದೆ ಆನಂದ್ ದೊಡ್ಡಮನಿ (45) ಕೂಡಾ ಗಾಯಗೊಂಡಿದ್ದಾರೆ. ಇದೀಬ ಇಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಮಲ್ಲಿಕಾರ್ಜುನ್ ದೊಡ್ಡಮನಿ ಟೈಲ್ಸ್ ವರ್ಕ್ಸ್ ಕೆಲಸ ಮಾಡುತ್ತಿದ್ದರು. ಗಾರೆ ಕೆಲಸ ಮಾಡುತ್ತಿದ್ದ ಆನಂದ್ ದೊಡ್ಡಮನಿ ಮೇ 1ರಂದು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ರಜೆ ಇದ್ದುದರಿಂದ ಮನೆಯಲ್ಲಿದ್ದರು.
ಅಪ್ಪನಿಗೆ ತಿಳಿಸದೆ ಬೈಕ್ ತೆಗೆದುಕೊಂಡು ಹೋಗಿದ್ದ ಮಲ್ಲಿಕಾರ್ಜುನ್, ರಾತ್ರಿ ಮನೆಗೆ ಮರಳಿದ್ದ. ಮದ್ಯದ ಅಮಲಿನಲ್ಲಿದ್ದ ಆನಂದ್ ದೊಡ್ಡಮನಿ, ತನ್ನನ್ನು ಹೇಳದೆ ಬೈಕ್ ತೆಗೆದುಕೊಂಡು ಹೋಗಿದ್ದಕ್ಕೆ ಮಗನ ಮೇಲೆ ಗರಂ ಆಗಿದ್ದರು. ಅದೇ ವಿಚಾರಕ್ಕೆ ಅಪ್ಪ, ಮಗನ ಮಧ್ಯೆ ಗಲಾಟೆಯಾಗಿತ್ತು.
ಈ ವೇಳೆ ಬಾಟಲ್ನಲ್ಲಿದ್ದ ಪೆಟ್ರೋಲ್ ತೆಗೆದು ಆನಂದ್ ದೊಡ್ಡಮನಿ ತನ್ನ ಮಗನ ಮೇಲೆ ಎರಚಿದ್ದರು. ಅದೇ ಸಂದರ್ಭದಲ್ಲಿ ಪಕ್ಕದ ಮನೆಯವರು ಹೊರಗಡೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಇಬ್ಬರನ್ನೂ ಸ್ಥಳೀಯರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ್ ದೇಹ ಶೇ.40ರಷ್ಟು ಸುಟ್ಟಿದ್ದು, ಆನಂದ್ ಸುಮಾರು ಶೇ.18 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ
Advertisement