

ಬೆಂಗಳೂರು: ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದ ಗ್ಯಾಂಗ್ನ್ನು ಯಲಹಂಕ ಪೊಲೀಸ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಈ ಗ್ಯಾಂಗ್ನಲ್ಲಿ ಇಬ್ಬರು ಅಪ್ರಾಪ್ತರೂ ಸೇರಿದ್ದು, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಕರೆಸಿ, ದಾಳಿ ನಡೆಸಿ ಹಣ ದೋಚುತ್ತಿದ್ದರೆಂದು ತಿಳಿದುಬಂದಿದೆ.
27 ವರ್ಷದ ಸಿವಿಲ್ ಎಂಜಿನಿಯರ್ ಒಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳು ಇದುವರೆಗೆ ಕನಿಷ್ಠ ಎಂಟು ಡೇಟಿಂಗ್ ಆ್ಯಪ್ ಬಳಕೆದಾರರನ್ನು ಇದೇ ರೀತಿಯಲ್ಲಿ ಗುರಿಯಾಗಿಸಿ ದರೋಡೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಮೇ 1ರಂದು ಸಂಜೆ 7ರಿಂದ 7.45ರ ನಡುವೆ ವೆಂಕಟಲಯದ ಜಯಮುನಿ ಲೇಔಟ್ ರಸ್ತೆಯ ಪಾಲನಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ.
ಚಿಕ್ಕಜಾಲದ ಬೃಂದಾವನ ಲೇಔಟ್ ನಿವಾಸಿಯಾಗಿರುವ ಅಜಿತ್ (ಹೆಸರು ಬದಲಿಸಲಾಗಿದೆ) ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದರು. ಆ್ಯಪ್ನಲ್ಲಿ ಪರಿಚಯವಾದವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಬಳಿಕ ಭೇಟಿಗೆ ತೆರಳಿದ್ದರು.
ಘಟನಾ ಸ್ಥಳಕ್ಕೆ ತೆರಳಿದಾಗ ಅಜಿತ್ಗೆ ನಾಲ್ವರು ಎದುರಾಗಿದ್ದು, ಅವರನ್ನು ವೆಂಕಟಲಯ ಅಂಡರ್ಪಾಸ್ ಮೂಲಕ ಜಯಮುನಿ ಲೇಔಟ್ ರಸ್ತೆಯತ್ತ ಕರೆದೊಯ್ದಿದ್ದಾರೆ. ಬಳಿಕ “ನಿನ್ನ ಸ್ನೇಹಿತರು ಮತ್ತು ಪೋಷಕರಿಗೆ ವಿಷಯ ತಿಳಿಸುತ್ತೇವೆ” ಎಂದು ಬೆದರಿಸಿ ಹಣಕ್ಕೆ ಒತ್ತಾಯಿಸಿದ್ದಾರೆ.
ಆರೋಪಿಗಳು ಅಜಿತ್ ಮೊಬೈಲ್ ಕಸಿದುಕೊಂಡು, ಖಾಸಗಿ ಶಾಲೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕು ತೋರಿಸಿ ಯುಪಿಐ ಪಾಸ್ವರ್ಡ್ ಕೇಳಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಲ್ಲೆ ನಡೆಸಿ, ಬಲವಂತವಾಗಿ ಮೊಬೈಲ್ ಪಾಸ್ವರ್ಡ್ ಪಡೆದು ಯುಪಿಐ ಮೂಲಕ ರೂ.16,000 ವರ್ಗಾವಣೆ ಮಾಡಿಕೊಂಡಿದ್ದಾರೆ.
ನಂತರ ಮೊಬೈಲ್ನ್ನು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಗಾಯಗೊಂಡ ಅಜಿತ್ ಅವರನ್ನು ಸ್ನೇಹಿತನೊಬ್ಬ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಿಂದ ಇದು ಮೆಡಿಕೋ-ಲೀಗಲ್ ಪ್ರಕರಣವೆಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬಂಧಿತರು ಇದೇ ರೀತಿ ಡೇಟಿಂಗ್ ಆ್ಯಪ್ ಬಳಕೆದಾರರನ್ನು ಟಾರ್ಗೆಟ್ ಮಾಡುತ್ತಿದ್ದರು. “ಇವರು ರೂಢಿಗತ ಅಪರಾಧಿಗಳಾಗಿದ್ದು. ಡೇಟಿಂಗ್ ಆ್ಯಪ್ ಬಳಕೆದಾರರನ್ನೇ ಗುರಿಯಾಗಿ ದರೋಡೆ ನಡೆಸುತ್ತಿದ್ದರುಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement