

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಒಳಜಗಳ ಮತ್ತು ನಾಯಕತ್ವದ ಗೊಂದಲವನ್ನು ಗುರಿಯಾಗಿಸಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, “ಜನರ ಸಮಸ್ಯೆ ಪರಿಹರಿಸುವ ಬದಲು ಕಾಂಗ್ರೆಸ್ ಸರ್ಕಾರ, ಕಳೆದ ಮೂರು ವರ್ಷಗಳಿಂದ ಒಳಜಗಳ ಬಗೆಹರಿಸುವಲ್ಲೇ ಸಮಯ ಕಳೆಯುತ್ತಿದೆ” ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡುವಿನ ನಾಯಕತ್ವದ ಚರ್ಚೆಯನ್ನು ಉಲ್ಲೇಖಿಸಿದ ಮೋದಿ, “ಮುಖ್ಯಮಂತ್ರಿ ಎಷ್ಟು ದಿನ ಹುದ್ದೆಯಲ್ಲಿ ಇರುತ್ತಾರೆ ಎಂಬುದನ್ನೂ ಕಾಂಗ್ರೆಸ್ ನಿರ್ಧರಿಸಲಾಗುತ್ತಿಲ್ಲ. ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಎಂಬುದೂ ಸ್ಪಷ್ಟವಿಲ್ಲ. ಎಲ್ಲವೂ ತೂಗು ಹಗ್ಗದಲ್ಲಿ ಸಿಲುಕಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತಷ್ಟು ಕಿಡಿಕಾರಿದ ಪ್ರಧಾನಿ, “ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ. ಅವರೂ ಸುಳ್ಳು, ಅವರ ಗ್ಯಾರಂಟಿಗಳೂ ಸುಳ್ಳು. ಕಾಂಗ್ರೆಸ್ನ ಅಧಿಕಾರದ ಪುಸ್ತಕದಲ್ಲಿ ಆಡಳಿತ ಎಂಬ ಅಧ್ಯಾಯವೇ ಇಲ್ಲ” ಎಂದು ಟೀಕೆ ಮಾಡಿದರು.
ಇತ್ತೀಚಿನ ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಮಾತನಾಡಿ, ದೇಶದ ಜನರು ಈಗ ವೇಗದ ಅಭಿವೃದ್ಧಿ ಮತ್ತು ಪರಿಹಾರ ಬಯಸುತ್ತಿದ್ದಾರೆ. ಜನರಿಗೆ ಈಗ ಭ್ರಷ್ಟಾಚಾರ ಬೇಡ, ವೇಗ ಬೇಕಿದೆ. ಜನರಿಗೆ ಸಮಸ್ಯೆಗಳ ಪರಿಹಾರ ಬೇಕು. ರಾಷ್ಟ್ರದ ಹಿತಾಸಕ್ತಿಯ ಆಧಾರದ ಮೇಲೆ ರಾಜಕೀಯ ಬೇಕು ಎಂದು ಜನರು ಹೇಳುತ್ತಿದ್ದಾರೆ” ಎಂದರು.
ಪುದುಚೇರಿ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಪ್ರಧಾನಿ, ಬಿಜೆಪಿ ಮತ್ತು ಎನ್ಡಿಎ ಮೈತ್ರಿಯ ಆಡಳಿತ ಮಾದರಿಯ ಮೇಲಿನ ಜನರ ವಿಶ್ವಾಸ ಹೆಚ್ಚುತ್ತಿದೆ. ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಬಿಜೆಪಿ ಉತ್ತಮ ಸಾಧನೆ ಮಾಡಿರುವುದನ್ನು ಅವರು ಪ್ರಸ್ತಾಪಿಸಿದರು.
ಕರ್ನಾಟಕ ಬಿಜೆಪಿ ಬೆಳವಣಿಗೆಯ ಬಗ್ಗೆ ಮಾತನಾಡಿದ ಮೋದಿ, “ಬಿಜೆಪಿ ಸಣ್ಣ ಪಕ್ಷವಾಗಿದ್ದ ಕಾಲದಲ್ಲಿಯೇ ಕರ್ನಾಟಕ ನಮಗೆ ಅಪಾರ ಶಕ್ತಿ ನೀಡಿತ್ತು. ಇಂದು ಬೆಂಗಳೂರಿನ ನೆಲದಿಂದ ಕೇಸರಿ ಬಣ್ಣದ ಸೂರ್ಯ ಉದಯಿಸಿರುವುದನ್ನು ನಾನು ಕಾಣುತ್ತಿದ್ದೇನೆ” ಎಂದು ಹೇಳಿದರು.
Advertisement