

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಕಣ್ಣಿಗೆ ಮೆಣಸಿನ ಪುಡಿ ಎಸೆದು, ಮಚ್ಚಿನಿಂದ ಬೆದರಿಸಿ ₹7.5 ಲಕ್ಷ ದೋಚಿದ್ದ ಆರೋಪದ ಮೇಲೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಪರಾಧ ನಡೆದ ಕೇವಲ ಮೂರು ಗಂಟೆಗಳಲ್ಲಿ ಪ್ರಕರಣ ಬೇಧಿಸಿದ್ದು, ಬಂಧಿತ ಆರೋಪಿಗಳನ್ನು ಯಶವಂತ್, ದರ್ಶನ್, ಭರತ್ ಮತ್ತು ವಿಶಕಾಂತಮೂರ್ತಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಗೌರಿಬಿದನೂರಿನ ವಿನಾಯಕನಗರ ಪ್ರದೇಶದಲ್ಲಿ ಮೇ 11 ರಂದು ಈ ಘಟನೆ ನಡೆದಿದೆ. ಆರೋಪಿಗಳಿಂದ ದರೋಡೆ ಮಾಡಿದ್ದ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶಿವಶಂಕರ ಆರಾಧ್ಯ ಉಪಾಹಾರ ಗೃಹ ನಡೆಸುತ್ತಿದ್ದು, ಕಾರುಗಳನ್ನು ಖರೀದಿಸಿ ಗುತ್ತಿಗೆ ಅಥವಾ ಬಾಡಿಗೆಗೆ ನೀಡುವ ಮೂಲಕ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದ್ದರು. ಈ ವ್ಯವಹಾರಕ್ಕೆ ಬೇಕಾದ ₹14 ಲಕ್ಷವನ್ನು ಹೊಂದಿಸಲು, ಅವರು ಕುಟುಂಬದ ಆಭರಣಗಳನ್ನು ಮಾರಿದ್ದರು.
ವಾಹನ ಖರೀದಿಸಲು ಮನೆಯಿಂದ ಸ್ವಲ್ಪ ಹಣದೊಂದಿಗೆ ಹೊರಟಿದ್ದಾಗ, ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ನಿವಾಸದ ಬಳಿ ಮೋಟಾರ್ ಸೈಕಲ್ನಲ್ಲಿ ಬಂದು, ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಮಚ್ಚಿನಿಂದ ಬೆದರಿಸಿ, ₹7.5 ಲಕ್ಷವಿದ್ದ ಚೀಲವನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಸಂತ್ರಸ್ತರ ದೂರಿನ ಮೇರೆಗೆ ಗೌರಿಬಿದನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಸಮಯದಲ್ಲಿ, ಟ್ರಾವೆಲ್ ವ್ಯವಹಾರಕ್ಕಾಗಿ ಕಾರುಗಳನ್ನು ಖರೀದಿಸಲು ಸಂತ್ರಸ್ತರ ಮನವೊಲಿಸಿದ್ದ ಯಶವಂತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಆತ ತನ್ನ ಸಹಚರರೊಂದಿಗೆ ದರೋಡೆ ಮಾಡಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪ್ರತ್ಯೇಕ ಪೊಲೀಸ್ ತಂಡಗಳು ಅಪರಾಧದಲ್ಲಿ ಭಾಗಿಯಾಗಿದ್ದ ಆತನ ಮೂವರು ಸಹಚರರನ್ನು ಬಂಧಿಸಿವೆ ಎಂದು ಅವರು ಹೇಳಿದರು.
ದರೋಡೆ ಮಾಡಿದ್ದ ₹7.5 ಲಕ್ಷ, ಒಂದು ಕಾರು ಮತ್ತು ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಮೋಟಾರ್ ಸೈಕಲ್ ಮತ್ತು ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement