

ಬೆಂಗಳೂರು: ಹೆಬ್ಬಾಳ ಪೊಲೀಸರು ಭಾರೀ ಮಾದಕ ವಸ್ತು ಜಾಲವನ್ನು ಪತ್ತೆಹಚ್ಚಿ, ಸುಮಾರು 35 ಕೋಟಿ ರೂ. ಮೌಲ್ಯದ 17.5 ಕೆಜಿ ಎಂಡಿಎಂಎ (MDMA) ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಮೂವರು ವಿದೇಶಿಗರು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳಲ್ಲಿ ಆರು ಮಂದಿಯನ್ನು ದೆಹಲಿ ಮತ್ತು ಹರಿಯಾಣದಲ್ಲಿ ಬಂಧಿಸಲಾಗಿದ್ದು, ಇಬ್ಬರನ್ನು ಬೆಂಗಳೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಪಶ್ಚಿಮ ದೆಹಲಿಯ ರೀನಾ (50), ದೆಹಲಿಯ ದೇಬಾಶಿಶ್ ಬ್ಯಾನರ್ಜಿ (66), ದೆಹಲಿಯ ಧೀರಜ್ (30), ಬೆಂಗಳೂರಿನ ನಿವಾಸಿಗಳಾದ ಮೊಹಮ್ಮದ್ ಮನ್ಸೂರ್ ಪಿ (30), ಮತ್ತು ಅಬ್ದುಲ್ ಸಮ್ಮದ್ (38), ಸೆನೆಗಲ್ನ ಡಾನ್ಫಾ ಜೆರಾಲ್ಡ್, ಟಾಂಜಾನಿಯಾದ ಮಾಗ್ರೆತ್ ಲಿಗಿನಿಕೊ ಚಾಲೆ ಮತ್ತು ಒಬಿಯಾನು ರೀಟಾ ಒಕೆಕೆ (34) ಎಂದು ಗುರುತಿಸಲಾಗಿದೆ.
ಜೆರಾಲ್ಡ್ ಮತ್ತು ಚಾಲೆ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದು ಹರಿಯಾಣದಲ್ಲಿ ನೆಲೆಸಿದ್ದರು. ಓಕೆಕೆ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ಬಂದು ದೆಹಲಿಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಉತ್ತರ ವಿಭಾಗದ ವಿಶೇಷ ಪೊಲೀಸ್ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ ಎಂದು ತಿಳಿಸಿದರು.
ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಮಾದಕ ವಸ್ತು ಪ್ರಕರಣದ ತನಿಖೆ ವೇಳೆ ಈ ಜಾಲದ ಸುಳಿವು ಸಿಕ್ಕಿತ್ತು. ಆ ಪ್ರಕರಣದಲ್ಲಿ ಒಂಬತ್ತು ಮಂದಿ ಬಂಧಿತರಾಗಿದ್ದು, ಅಲ್ಲಿಂದ ಸಿಕ್ಕ ಮಾಹಿತಿ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಹೆಬ್ಬಾಳ ಭಾಗದ ಈ ಡ್ರಗ್ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಿದರು.
ಸುಮಾರು 40 ಮಂದಿ ಪೊಲೀಸರ ತಂಡ ಬೆಂಗಳೂರಿನಿಂದ ದೆಹಲಿ ತನಕ ಕಾರ್ಯಾಚರಣೆ ನಡೆಸಿ, ವಿವಿಧ ಸ್ಥಳಗಳಿಂದ 17.5 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದೆ. “ನಗರ ಪೊಲೀಸ್ ಇತಿಹಾಸದಲ್ಲೇ ಇದು ದೊಡ್ಡ ಪ್ರಮಾಣದ ಕಾರ್ಯಾಚರಣೆಯಾಗಿದೆ. ಪ್ರಮುಖ ಸರಬರಾಜುದಾರರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದರು.
ಆರೋಪಿಗಳು ಎಂಡಿಎಂಎ ಕ್ರಿಸ್ಟಲ್ಗಳನ್ನು ಸೀರೆಗಳು, ಮಡಚುವ ಕಬ್ಬಿಣದ ಮೇಜು-ಕುರ್ಚಿಗಳೊಳಗೆ ಅಡಗಿಸಿ ರೈಲಿನ ಮೂಲಕ ದೆಹಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಮಾದಕ ವಸ್ತುಗಳನ್ನು ದೆಹಲಿಯಲ್ಲೇ ತಯಾರಿಸಿರಬಹುದು ಅಥವಾ ನೈಜೀರಿಯಾ ಸೇರಿದಂತೆ ವಿದೇಶಗಳಿಂದ ಕಳ್ಳಸಾಗಣೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಡ್ರಗ್ಗಳನ್ನು ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಕಾರುಗಳಲ್ಲಿ ಸಂಗ್ರಹಿಸಿ, ಬಳಿಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹೆಬ್ಬಾಳದ ಆನಂದನಗರದ ಬಳಿ ಕಾರೊಂದನ್ನು ತಪಾಸಣೆ ಮಾಡಿದ ವೇಳೆ ಮೊದಲಿಗೆ 4.3 ಕೆಜಿ ಎಂಡಿಎಂಎ ಪತ್ತೆಯಾಯಿತು. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದ ಬಳಿಕ ನಡೆದ ತನಿಖೆಯಲ್ಲೇ ಅಂತರರಾಜ್ಯ ಡ್ರಗ್ ಜಾಲದ ಬೃಹತ್ ಕಳ್ಳಸಾಗಣೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement