ಬೆಂಗಳೂರಿನಲ್ಲಿ NCB ಭರ್ಜರಿ ಕಾರ್ಯಾಚರಣೆ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿಗರು ವಶಕ್ಕೆ, ಗಡೀಪಾರಿಗೆ ಕ್ರಮ..!

ಬೆಂಗಳೂರಿನಲ್ಲಿ NCB ಭರ್ಜರಿ ಕಾರ್ಯಾಚರಣೆ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿಗರು ವಶಕ್ಕೆ, ಗಡೀಪಾರಿಗೆ ಕ್ರಮ..!
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿ ಪ್ರಜೆಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

ಕೃಷ್ಣರಾಜಪುರಂ ಮತ್ತು ಕಮ್ಮನಹಳ್ಳಿ ಪ್ರದೇಶಗಳಲ್ಲಿ ಈ ಐವರು ವಾಸಿಸುತ್ತಿರುವ ಬಗ್ಗೆ ದೀರ್ಘಕಾಲ ನಿಗಾ ಇರಿಸಿ, ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಅವರು ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ.

ಬಳಿಕ ಅಗತ್ಯ ಕ್ರಮಕ್ಕಾಗಿ ಅವರನ್ನು ಸಂಬಂಧಪಟ್ಟ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ವಿದೇಶಿಗರ ಕಾಯ್ದೆಯಡಿ ಕ್ರಮ ಹಾಗೂ ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಎನ್‌ಸಿಬಿ ಬೆಂಗಳೂರು ಘಟಕವು ಇದೇ ರೀತಿಯಾಗಿ ಎಂಟು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಿತ್ತು. ಅವರಲ್ಲಿ ಏಳು ಮಂದಿ ಆಫ್ರಿಕಾ ಮೂಲದವರು ಹಾಗೂ ಒಬ್ಬ ಯೆಮೆನ್ ಪ್ರಜೆ ಆಗಿದ್ದರು.

ವೀಸಾ ನಿಯಮಗಳನ್ನು ಉಲ್ಲಂಘಿಸಿ ವಾಸಿಸುತ್ತಿದ್ದ ಅವರು ಮಾದಕವಸ್ತು ಸಾಗಾಟದಲ್ಲಿ ಭಾಗಿಯಾಗಿರುವ ಶಂಕೆಯೂ ವ್ಯಕ್ತವಾಗಿತ್ತು. ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಬಳಿಕ ಗಡೀಪಾರು ಮಾಡಲಾಗಿದೆ ಎಂದು ಎನ್‌ಸಿಬಿ ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನಗರ ಪೊಲೀಸರು ಹಾಗೂ ಪೂರ್ವ ಮತ್ತು ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರ ಸಹಕಾರದೊಂದಿಗೆ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

ಶಂಕಿತ ವಿದೇಶಿಗರ ಮೇಲೆ ಆರಂಭದಲ್ಲಿ ರಹಸ್ಯವಾಗಿ ನಿಗಾ ಇರಿಸಲಾಗಿತ್ತು. ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಕಂಡುಬರದಿದ್ದರೂ, ಭಾರತದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ಬೆಂಗಳೂರಿನಲ್ಲಿ NCB ಭರ್ಜರಿ ಕಾರ್ಯಾಚರಣೆ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿಗರು ವಶಕ್ಕೆ, ಗಡೀಪಾರಿಗೆ ಕ್ರಮ..!
ಅಕ್ರಮ ವಲಸೆ, ಮಾದಕ ದ್ರವ್ಯ ಪ್ರಕರಣಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ: ಈ ವರ್ಷ 427 ಮಂದಿ ವಿದೇಶಿಗರು ಗಡಿಪಾರು

ವಿದೇಶಿ ಬಾಡಿಗೆದಾರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯ

ಈ ಕಾರ್ಯಾಚರಣೆಯು 1946ರ ವಿದೇಶಿಗರ ಕಾಯ್ದೆಯ ಸೆಕ್ಷನ್ 7ರ ಉಲ್ಲಂಘನೆಯನ್ನೂ ಬೆಳಕಿಗೆ ತಂದಿದೆ ಎಂದು ಎನ್‌ಸಿಬಿ ಹೇಳಿದೆ.

ಕಾನೂನಿನ ಪ್ರಕಾರ, ವಿದೇಶಿ ಪ್ರಜೆಗಳಿಗೆ ವಸತಿ ನೀಡುವ ಮನೆ ಮಾಲೀಕರು, ಅವರಿಗೆ ವಸತಿ ಕಲ್ಪಿಸಿದ 24 ಗಂಟೆಗಳೊಳಗೆ ‘ಫಾರ್ಮ್-ಸಿ’ ಮೂಲಕ ಪೊಲೀಸ್ ಅಥವಾ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಮಾಹಿತಿ ನೀಡಬೇಕು. ಈ ನಿಯಮ ಪಾಲಿಸದಿದ್ದರೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಮಾದಕವಸ್ತು ಮುಕ್ತ ಭಾರತ ನಿರ್ಮಾಣದ ಉದ್ದೇಶದೊಂದಿಗೆ ಎನ್‌ಸಿಬಿ ತನ್ನ ‘ನಾರ್ಕೋಟಿಕ್ಸ್ ವಿಷನ್ ಡಾಕ್ಯುಮೆಂಟ್ 2026-27’ ಅಡಿಯಲ್ಲಿ ವರ್ಷಪೂರ್ತಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ.

ಮಾದಕವಸ್ತು ಸಾಗಾಟದಲ್ಲಿ ಭಾಗಿಯಾಗಿರುವ ಶಂಕಿತ ವಿದೇಶಿಗರನ್ನು ಪತ್ತೆಹಚ್ಚುವುದು ಮತ್ತು ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ವಿದೇಶಿಗರನ್ನು ಗುರುತಿಸಿ ಗಡೀಪಾರು ಮಾಡುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಮಾದಕವಸ್ತುಗಳ ಮಾರಾಟ, ಸಾಗಾಟ ಅಥವಾ ವಹಿವಾಟಿನ ಕುರಿತು ಸಾರ್ವಜನಿಕರು ‘ಮಾನಸ್’ ರಾಷ್ಟ್ರೀಯ ಮಾದಕವಸ್ತು ಸಹಾಯವಾಣಿ 1933ರ ಉಚಿತ ಸಂಖ್ಯೆಗೆ ಮಾಹಿತಿ ನೀಡಬಹುದು ಎಂದು ಎನ್‌ಸಿಬಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com