

ಬೆಂಗಳೂರು: ಆರೋಗ್ಯ ಹಾಗೂ ಕುಟುಂಬ ಸಮಸ್ಯೆ ನಿವಾರಿಸುವುದಾಗಿ ನಂಬಿಸಿ ಗೃಹಿಣಿಯೊಬ್ಬರಿಂದ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ 329 ಗ್ರಾಂ ಚಿನ್ನಾಭರಣಗಳನ್ನು ಪಡೆದು ನಕಲಿ ಜ್ಯೋತಿಷಿಯೊಬ್ಬ ವಂಚಿಸಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಗಿರಿನಗರದ ನಿವಾಸಿ ಜಿ. ಸಿ. ಶಾಂತಮ್ಮ ಎಂಬುವವರೇ ವಂಚನೆಗೊಳಗಾದ ಗೃಹಿಣಿ. ಜ್ಯೋತಿಷಿ ಸೋಗಿನಲ್ಲಿ ಬಂದಿದ್ದ ವೆಂಕಟೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ.
ದೀರ್ಘಕಾಲದ ಆರೋಗ್ಯ ಸಮಸ್ಯೆಯೊಂದರ ಚಿಕಿತ್ಸೆಗಾಗಿ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಆಸ್ಪತ್ರೆಯ ಹೊರಭಾಗದ ಫುಟ್ಪಾತ್ನಲ್ಲಿ ವೆಂಕಟೇಶ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಆತ ಅವರಿಗೆ ಕೆಲವು ಪರಿಹಾರಗಳನ್ನು ಸೂಚಿಸಿದ್ದ ಎನ್ನಲಾಗಿದೆ.
ನಂತರ ಶಾಂತಮ್ಮ ಅವರ ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ, ತಮ್ಮ ಮಗನಿಗೆ ಇದ್ದ ಕುಡಿತ ಮತ್ತು ಧೂಮಪಾನದ ಚಟ ಬಿಡಿಸಲು ಹಾಗೂ ಮಗಳಿಗೆ ಮದುವೆಯಾಗಲು ಸಹಾಯ ಪಡೆಯುವ ಉದ್ದೇಶದಿಂದ ವೆಂಕಟೇಶ್ ಅವರನ್ನು ಹುಡುಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಆದರೆ, ಅಂದು ಆತ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಯ ಸಮೀಪದ ಆಟೋರಿಕ್ಷಾ ಚಾಲಕರೊಬ್ಬರಿಗೆ ತಮ್ಮ ಮೊಬೈಲ್ ಸಂಖ್ಯೆ ನೀಡಿ, ಅದನ್ನು ವೆಂಕಟೇಶ್ಗೆ ನೀಡುವಂತೆ ಕೇಳಿಕೊಂಡಿದ್ದರು.
ವಾರದ ಬಳಿಕ ವೆಂಕಟೇಶ್ ಶಾಂತಮ್ಮ ಅವರಿಗೆ ಕರೆ ಮಾಡಿದ್ದಾನೆ. ತಮ್ಮ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಲು ಆತನನ್ನು ಮನೆಗೆ ಆಹ್ವಾನಿಸಿದ್ದರು. ಮನೆಗೆ ಬಂದ ಆತ ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ, ಶೀಘ್ರದಲ್ಲೇ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಭರವಸೆ ನೀಡಿದ್ದ ಎನ್ನಲಾಗಿದೆ.
ಇದಾದ ಒಂದು ವಾರದ ಬಳಿಕ ಮತ್ತೆ ಮನೆಗೆ ಬಂದ ವೆಂಕಟೇಶ್, ಶಾಂತಮ್ಮ ಅವರ ಮಗ ಮತ್ತು ಮಗಳ ಒಳಿತಿಗಾಗಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಬೇಕಿದೆ ಎಂದು ಹೇಳಿದ್ದಾನೆ. ಪೂಜೆ ನೆರವೇರಿಸಲು ಅವರ ಚಿನ್ನಾಭರಣಗಳು ಬೇಕಾಗುತ್ತವೆ ಎಂದು ತಿಳಿಸಿದ್ದಾನೆ.
ಆತನ ಮಾತನ್ನು ನಂಬಿದ ಶಾಂತಮ್ಮ ಅವರು ಹಂತ ಹಂತವಾಗಿ ಒಟ್ಟು 329 ಗ್ರಾಂಗೂ ಅಧಿಕ ಚಿನ್ನಾಭರಣಗಳನ್ನು ಆತನಿಗೆ ನೀಡಿದ್ದಾರೆ. ಸರ, ಬಳೆ, ಕಿವಿಯೋಲೆ ಮತ್ತು ಉಂಗುರ ಸೇರಿದಂತೆ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಆತ ಪಡೆದಿದ್ದಾನೆ ಎನ್ನಲಾಗಿದೆ. ಸುಮಾರು ಒಂದು ವರ್ಷದ ಕಾಲ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಂದು ಮನೆಗೆ ಬರುತ್ತಿದ್ದ ವೆಂಕಟೇಶ್, ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣಗಳನ್ನು ಸಂಗ್ರಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಗಸ್ಟ್ 19ರಂದು ಶಾಂತಮ್ಮ ಅವರು ವೆಂಕಟೇಶ್ಗೆ ಕರೆ ಮಾಡಿ ವರಮಹಾಲಕ್ಷ್ಮಿ ಪೂಜೆಗಾಗಿ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಅದೇ ರಾತ್ರಿ ವೆಂಕಟೇಶ್ನ ಮೊಬೈಲ್ನಿಂದ ಅವರಿಗೆ ಗಾಯಗೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಕಳುಹಿಸಲಾಗಿದೆ. ಬಳಿಕ ವೆಂಕಟೇಶ್ನ ಸ್ನೇಹಿತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಶಾಂತಮ್ಮ ಅವರಿಗೆ ಕರೆ ಮಾಡಿ, ರಸ್ತೆ ಅಪಘಾತದಲ್ಲಿ ವೆಂಕಟೇಶ್ಗೆ ಗಂಭೀರ ತಲೆ ಗಾಯಗಳಾಗಿದ್ದು, ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಮಹಿಳೆ ಗಾಬರಿಯಿಂದ ಈ ವಿಡಿಯೋವನ್ನು ತನ್ನ ಮಗಳಿಗೆ ತೋರಿಸಿದಾಗ, ಅದು ಕೃತಕವಾಗಿ ಸೃಷ್ಟಿಸಲಾದ ನಕಲಿ AI ವಿಡಿಯೋ (Deepfake) ಎಂಬುದು ಪತ್ತೆಯಾಗಿದೆ. ಅಷ್ಟರಲ್ಲೇ ಆರೋಪಿ ವೆಂಕಟೇಶ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾನೆ. ಅನುಮಾನಗೊಂಡ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಇದೀಗ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4) ರ ಅಡಿಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ನಕಲಿ ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ.