ನವದೆಹಲಿ: ದಕ್ಷಿಣ ಭಾರತದಲ್ಲಿ ಬರದ ಛಾಯೆ ಆವರಿಸಿದ್ದರೆ ನೆರೆಯ ಬಾಂಗ್ಲಾದೇಶವನ್ನು ಅಪ್ಪಳಿಸಿರುವ ಕೊಮೆನ್ ಚಂಡಮಾರುತದ ಪ್ರಭಾವಕ್ಕೆ ಸಿಲುಕಿರುವ ಈಶಾನ್ಯ ಹಾಗೂ
ಪೂರ್ವ ಭಾರತದಲ್ಲಿ ಭಾನುವಾರವೂ ಭಾರಿ ಮಳೆಯಾಗಿದೆ.
ಮಣಿಪುರ, ಪಶ್ಟಿಮ ಬಂಗಾಳ ಹಾಗೂ ಒಡಿಶಾದಲ್ಲಿ ಸಾವಿರಾರು ಹಳ್ಳಿಗಳು ಜಲಾವೃತವಾಗಿವೆ. ಮಳೆ ಸಂಬಂಧಿ ಅನಾಹುತದಲ್ಲಿ ಸಾವಿಗೀಡಾದವರ ಸಂಖ್ಯೆ 100ಕ್ಕೆ ದಾಟಿದೆ. ಚಂಡಮಾರುತ ಅಪ್ಪಳಿಸಿದ ನಂತರ ಕಾಣಿಸಿಕೊಂಡಿರುವ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಬಂಗಾಳವೊಂದರಲ್ಲೇ 2 ದಿನ ಬಿಡದೆ ಸುರಿದ ಮಳೆಗೆ ಸಾವಿನ ಸಂಖ್ಯೆ 60 ದಾಟಿದೆ. ದಕ್ಷಿಣ ಪಶ್ಟಿಮ ಬಂಗಾಳ ಸಂಪೂರ್ಣವಾಗಿ ಪ್ರವಾಹದ ತೆಕ್ಕೆಗೆ ಸಿಲುಕಿರುವ ಹಿನ್ನೆಲೆಯಲ್ಲಿ 18 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಸಿಕ್ಕಿಹಾಕಿಕೊಂಡಿ ರುವವರ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ನೆರವು ಕೋರಿದೆ.
ಭಾಗೀರಥಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನದಿ ತಟದ 450 ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮತ್ತೆ 150 ಜನರು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದು ಸೇನೆ ಅವರ ನೆರವಿಗೆ ಧಾವಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಬರ್ದ್ವಾನ್, ಮುರ್ಷಿದಾಬಾದ್, ಪಶ್ಟಿಮ ಮಿಡ್ನಾಪುರ್, ಹೌರಾ ಜಿಲ್ಲೆಗಳು ಮಳೆಯಬ್ಬರದಿಂದ ತೀವ್ರ ಹಾನಿಗೀಡಾಗಿವೆ. ಇನ್ನು ರಾಜಧಾನಿ ಕೋಲ್ಕತಾದ ಕೆಲವು ಭಾಗಗಳು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾವೃತವಾಗಿವೆ. ಈ ಮಧ್ಯೆ, ಮಣಿಪುರದಲ್ಲಿ ಭೂಕುಸಿತಕ್ಕೆ ಜೊವುಮಾಲ್ ಗ್ರಾಮದಲ್ಲಿ ಶನಿವಾರ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವು ಮನೆಗಳು ನಾಶವಾಗಿದ್ದವು.
ಮಾ್ಯನ್ಮಾರ್ನ ಗಡಿಯಲ್ಲಿರುವ ಈ ಗ್ರಾಮದಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಕ್ಕೆ ಅಸ್ಸಾಂ ರೈಫಲ್ಸ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರನ್ನು ಕಳುಹಿಸಿಕೊಡಲಾಗಿದೆ.. ಹಿಮಾಚಲ ಪ್ರದೇಶದಲ್ಲೂ ಅಲ್ಲಲ್ಲಿ ಭಾರಿ ಮಳೆಯಾಗುತ್ತಿದೆ. ದಿಢೀರ್ ಭೂಕುಸಿತದಿಂದಾಗಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಒಡಿಶಾದಲ್ಲೂ ಮಳೆಯಿಂದಾಗಿ 10 ಗ್ರಾಮಗಳು, ಸಂಪೂರ್ಣ ಜಲಾವೃತವಾಗಿವೆ. ಒಡಿಶಾದಲ್ಲಿ ಮಳೆಯಿಂದಾಗಿ ಐದು ಲಕ್ಷ ಮಂದಿಯನ್ನು ಸಂತ್ರಸ್ತರ ಶಿಬಿರಕ್ಕೆ ರವಾನಿಸಲಾಗಿದೆ. ಶನಿವಾರಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಭಾನುವಾರ ನೆರೆ ಪರಿಸ್ಥಿತಿ ಸುಧಾರಿಸಿದೆ. ಜಾರ್ಖಂಡ್ನಲ್ಲೂ ಭಾರಿ ಮಳೆಯಾಗುತ್ತಿದ್ದು, ರಿಧಿಹ್ ಹಾಗೂ ಛಾತ್ರಾ ಜಿಲ್ಲೆಗಳಲ್ಲಿ ತಗ್ಗುಪ್ರದೇಶ ಗಳು ಜಲಾವೃತವಾಗಿವೆ. ಇನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದಲ್ಲೂ ಮಳೆಯಾಗುತ್ತಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ.
Advertisement