ಭಾರತ ಅಮೆರಿಕಾದ 'ಬೆಸ್ಟ್ ಫ್ರೆಂಡ್‌': ಒಬಾಮ

ನಮಸ್ತೆ ಎನ್ನುವ ಮೂಲಕ ತಮ್ಮ ಭಾಷಣ ಆರಂಭಿಸಿದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ವಿವೇಕಾನಂದ ಮತ್ತು ಗಾಂಧೀಜಿಯವರನ್ನು ಸ್ಮರೀಸಿದ್ದಾರೆ...
ಬರಾಕ್ ಒಬಾಮ
ಬರಾಕ್ ಒಬಾಮ

ನವದೆಹಲಿ: ನಮಸ್ತೆ ಎನ್ನುವ ಮೂಲಕ ತಮ್ಮ ಭಾಷಣ ಆರಂಭಿಸಿದ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ವಿವೇಕಾನಂದ ಮತ್ತು ಗಾಂಧೀಜಿಯವರನ್ನು ಸ್ಮರೀಸಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿರುವ ಸಿರಿಪೋರ್ಟ್ ಆಡಿಟೋರಿಯಂನಲ್ಲಿ ವಿಶೇಷ ಆಮಂತ್ರಿತರನ್ನುದ್ದೇಶಿಸಿ ಭಾಷಣ ಮಾಡಿದ ಬರಾಕ್ ಒಬಾಮ, ವಿವೇಕಾನಂದರು ಅಮೆರಿಕನ್ನರು ನನ್ನ ಸೋದರ, ಸೋದರಿಯರು ಎಂದಿದ್ರು, ಈಗ ನಾನು ಹೇಳುತ್ತೇನೆ ಭಾರತೀಯರು ಅಮೆರಿಕನ್ನರ ಸೋದರ ಸೋದರಿಯರು. ಭಾರತಕ್ಕೆ ಅಮೆರಿಕ ಸ್ನೇಹವನ್ನು ತಂದಿದ್ದೇನೆ. ಭಾರತ ಅಮೆರಿಕಾದ ಬೆಸ್ಟ್ ಫ್ರೆಂಡ್ ಎಂದು ಹೇಳಿದ್ದಾರೆ.

ವಿವೇಕಾನಂದರಿಂದ ಅಮೆರಿಕಕ್ಕೆ ಹಿಂದುತ್ವ, ಯೋಗ ಪರಿಚಯವಾಯಿತು. ಗಾಂಧೀಜಿ ಅಹಿಂಸೆಯ ಸಂದೇಶವನ್ನ ಜಗತ್ತಿಗೆ ಸಾರಿದ್ದಾರೆ. ವಿವೇಕಾನಂದ, ಗಾಂಧೀಜಿ, ಮಾರ್ಟಿನ್ ಲೂಥರ್ ನನಗೆ ಆದರ್ಶವಾದಿಗಳು. ಈ ಗಣ್ಯರು ನಡೆದಂತ ಹಾದಿಯಲ್ಲಿ ನಾವು ನಡೆಯಬೇಕು ಎಂದು ಅವರು ಕರೆ ನೀಡಿದ್ದಾರೆ.

ಭಾರತ ಮತ್ತು ಅಮೆರಿಕಾ ಮಧ್ಯೆ ಹೊಸ ಅಧ್ಯಾಯ ಶುರುವಾಗಿದೆ. ನನ್ನ ಈ ಭೇಟಿಯಿಂದ ಭಾರತ ಮತ್ತು ಅಮೆರಿಕದ ಸ್ನೇಹ ಮತ್ತಷ್ಟು ಬಲಗೊಳ್ಳಲಿದೆ. ಗಣರಾಜ್ಯೋತ್ಸವಕ್ಕೆ ಬಂದ ಮೊದಲ ಅಮೆರಿಕ ಅಧ್ಯಕ್ಷ ನಾನು. ಇದು ನನಗೆ ಸಂದ ಅತಿ ದೊಡ್ಡ ಗೌರವ. ನನ್ನ ಈ ಭೇಟಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ನಾನು ಮೊದಲ ಪ್ರಾಶಸ್ತ್ಯ ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಭಾರತೀಯರು ಅಮೆರಿಕವನ್ನು ಮತ್ತಷ್ಟು ಬಲಗೊಳಿಸಿದ್ದಾರೆ. ಅಮೆರಿಕಾದಲ್ಲಿ 30 ಲಕ್ಷ ಭಾರತೀಯರು ಇರುವುದಕ್ಕೆ ಹೆಮ್ಮ ಪಡುವೆ. ಅಮೆರಿಕ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರು ಕೊಡುಗೆ ಅಪಾರ. ಅಮೆರಿಕದ ಅಭಿವೃದ್ಧಿಯಲ್ಲಿ ಭಾರತದ ಪಾತ್ರವೂ ಇದೆ. ಭಾರತ ಅಭಿವೃದ್ಧಿಯತ್ತ ಸಾಗುತ್ತಿದ್ದು, ಭಾರತದತ್ತ ನೋಡಿದಾಗ ನಮ್ಮದೇ ಪ್ರತಿಬಿಂಬ ಕಾಣುತ್ತದೆ. ಇನ್ನು ಮುಂದೆ ಉಭಯ ರಾಷ್ಟ್ರಗಳಲ್ಲಿ ಇನ್ನಷ್ಟು ಉದ್ಯೋಗ ಅವಕಾಶ ಹೆಚ್ಚಳವಾಗಲಿದೆ ಎಂದ ಅವರು, ಈ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಭಾರತ ದಾರಿ ದೀಪವಾಗಲಿದೆ ಎಂದಿದ್ದಾರೆ.

ಜಾಗತಿಕ ತಾಪಮಾನ ಇಂದಿನ ಅತಿ ದೊಡ್ಡ ಸಮಸ್ಯೆ. ಜಾಗತಿಕ ತಾಪಮಾನ ಇಳಿಕೆ ನಮ್ಮ ಮುಂದಿರುವ ದೊಡ್ಡ ಸವಾಲು. ಹಿಮಾಲಯದಲ್ಲಿ ಹಿಮಗಡ್ಡೆಗಳು ಕರಗುತ್ತಿವೆ, ಮಾನ್ಸೂನ್ ಬದಲಾಗುತ್ತಿದೆ. ಇದು ನಮಗೆಲ್ಲಾ ಆತಂಕಕಾರಿ ವಿಷಯವಾಗಿದೆ. ಪರಿಸರ ಸಮತೋಲನಕ್ಕಾಗಿ ಭಾರತ ಮತ್ತು ಅಮೆರಿಕಾ ಜಂಟಿಯಾಗಿ ದುಡಿಯಬೇಕಿದೆ. ಜಾಗತಿಕ ತಾಪಮಾನ ಕಡಿಮೆ ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಯುವಕರ ಕರೆಗೆ ಓಗೊಡುವುದಕ್ಕಿಂತ ಸಂತಸ ಬೇರೊಂದಿಲ್ಲ. ಉತ್ತಮ ಬಾಂಧವ್ಯದೊಂದಿಗೆ ಯುವ ಪೀಳಿಗೆ ಅಭಿವೃದ್ಧಿಗೆ ದುಡಿಯೋಣ. ಬಡತನ ನಿವಾರಣೆಗೆ ಯುವ ಜನಾಂಗ ಮುಂದಾಗಬೇಕು ಹಾಗಾಗಿ,  ಪ್ರಗತಿಯ ಹಾದಿಯಲ್ಲಿ ಯುವಜನರ ಕೊಡುಗೆ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪರಮಾಣು ಒಪ್ಪಂದಿಂದ ನಮಗೆ ತುಂಬಾ ಲಾಭವಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ನಾವು ನಮ್ಮ ಸ್ಥಾನವನ್ನ ಬಲಪಡಿಸಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ರೂಪಿಸಲಿದ್ದು, ವಿದ್ಯುತ್ ತಯಾರಿಕೆಯಲ್ಲಿ ಭಾರತಕ್ಕೆ ಅಮೆರಿಕ ಸಹಕಾರ ಮಾಡಲಿದೆ. ಮಾನವ ಸಾಗಣೆ ತಡೆಗೆ ಒಟ್ಟಾಗಿ ಕ್ರಮ ಜರುಗಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಭಯೋತ್ಪಾದನೆ ಈಗ ಜಾಗತಿಕ ಪಿಡುಗಾಗಿದೆ. ಉಗ್ರ ನಿಗ್ರಹಕ್ಕೆ ಭಾರತ, ಅಮೆರಿಕ ಕೈಜೋಡಿಸಲಿದೆ. ಭಯೋತ್ಪಾದನೆ ಎಷ್ಟು ಭಯಂಕರ ಎಂಬುದು ನಮಗೆ ತಿಳಿದಿದೆ. ಇದನ್ನು ಬುಡಸಮೇತ ಹತ್ತಿಕ್ಕುವ ಕೆಲಸವಾಗಬೇಕಿದೆ ಎಂದು ಅವರು ಹೇಳಿದ್ದಾರೆ.

ಬಾಲಿವುಡ್‌ನ ಡಿಡಿಎಲ್‌ಜೆ ಚಿತ್ರ ಹಾಗೂ ನರೇಂದ್ರ ಮೋದಿ ಸರ್ಕಾರದ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಯನ್ನು ಪ್ರಶಂಸಿದ ಅವರು ನಾವು ವಿಭಿನ್ನ ಇತಿಹಾಸವನ್ನ ಹೊಂದಿದ್ದೇವೆ ಆದರೆ, ಸಮಾನ ಗುರಿಯನ್ನ ಇಟ್ಟುಕೊಂಡಿದ್ದೇವೆ. ಮತ್ತೆ ಒಂದೇ ಹಾದಿಯಲ್ಲಿ ನಡೆಯಲು ತಯಾರಾಗಿದ್ದೇವೆ. ಭಾರತ ಮತ್ತು ಭಾರತೀಯರ ಮೇಲೆ ನನಗೆ ನಂಬಿಕೆ ಎಂದ ಒಬಾಮ ಜೈಹಿಂದ್ ಎನ್ನುವ ಮೂಲಕ ತಮ್ಮ ಭಾಷಣ ಮುಗಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com