ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಪಾಕಿಸ್ತಾನದೊಂದಿಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಮಂಗಳವಾರ ಹೇಳಿದ್ದಾರೆ.
ಸಿಂಧೂ ನದಿ ನೀರು ಹಂಚಿಕೆ 1960ರ ಒಪ್ಪಂದವನ್ನು ಉಭಯ ರಾಷ್ಟ್ರಗಳು ಉಲ್ಲಂಘಿಸುತ್ತಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ ಎಂದು ವಿಶ್ವ ಬ್ಯಾಂಕ್ ಈ ಹಿಂದೆ ಹೇಳಿತ್ತು.
ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ವಿಕಾಸ್ ಸ್ವರೂಪ್ ಅವರು, ಭಾರತ ಈ ಹಿಂದೆ ತಜ್ಞರ ತಂಡವೊಂದನ್ನು ನೇಮಕ ಮಾಡುವಂತೆ ವಿಶ್ವ ಬ್ಯಾಂಕ್ ಬಳಿ ಮನವಿ ಮಾಡಿತ್ತು. ಇದರಂತೆ ಪಾಕಿಸ್ತಾನ ಸರ್ಕಾರ ಕೂಡ ಉಭಯ ರಾಷ್ಟ್ರಗಳ ನಡುವೆ ಇರುವ ತಾಂತ್ರಿಕ ವ್ಯತ್ಯಾಸಗಳನ್ನು ತೀರ್ಮಾನಿಸುವಂತೆ ತಿಳಿಸಿತ್ತು. ವಿಶ್ವ ಬ್ಯಾಂಕ್ ಎರಡು ರಾಷ್ಟ್ರಗಳ ಮನವಿಯನ್ನು ಪರಿಗಣಿಸಿದ್ದು, ಏಕಕಾಲಿಕವಾಗಿ ಎರಡೂ ಪ್ರಕ್ರಿಯೆಗಳನ್ನು ಆರಂಭಿಸಿದೆ.
ಎರಡೂ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ಒಪ್ಪಂದಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಉಭಯ ರಾಷ್ಟ್ರಗಳ ನಡುವೆ ಇರುವ ಪರಿಸ್ಥಿತಿಯಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಕಷ್ಟಕರವಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಆದರೆ, ಸಿಂಧೂ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಪಾಕಿಸ್ತಾನ ಜೊತೆಗೆ ಇರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದಾರೆ.
Advertisement