ಖುಷಿನಗರ: ನಮ್ಮ ರೈತರ ಜೀವನದಲ್ಲಿ ಬದಲಾವಣೆಗಳನ್ನು ತಂದಿದ್ದರೆ, ಭಾರತ ಇಂದು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಖುಷಿನಗರದಲ್ಲಿ ಆಯೋಜಿಸಲಾಗಿದ್ದ ಪರಿವರ್ತನ್ ರ್ಯಾಲಿಯಲ್ಲಿ ಮಾತನಾಡಿರುವ ಅವರು, ರೈತರು ಹಾಗೂ ಗ್ರಾಮಗಳು ದೇಶದ ಶಕ್ತಿಯಾಗಿದ್ದು, ರೈತರ ಜೀವನಗಳಲ್ಲಿ ಬದಲಾವಣೆಗಳನ್ನು ತಂದಿದ್ದೇ ಆಗಿದ್ದರೆ, ದೇಶ ಇಂದು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ರೈತರು ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಶ್ರಮಪಡುತ್ತಿದೆ. ದೇಶದಲ್ಲಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಗತ್ಯವಿರುವ ಸೌಲಭ್ಯಗಳನ್ನು ನೀಡಿದರೆ, ಅವರೇಕೆ ಪದೇ ಪದೇ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಾರೆ? ನೀವು ನಮಗೆ ಅಧಿಕಾರವನ್ನು ಕೊಟ್ಟಿದ್ದೀರ. ನಿಮ್ಮ ಸೇವಕರು ನಾವು. ನಿಮ್ಮ ಸಾಲವನ್ನು ತೀರಿಸಲು ನಾನು ಇಲ್ಲಿಗೆ ಬಂದಿದ್ದೇನೆ.
ಆರ್ಥಿಕ ಪ್ಯಾಕೇಜ್ ವೊಂದನ್ನು ನೀಡುವಂತೆ ಕೋರಿ ಕೆಲ ಸಕ್ಕರೆ ಕಾರ್ಖಾನೆಯವರು ನನ್ನ ಬಳಿ ಬಂದಿದ್ದರು. ಇದು ಹಳೆಯ ಹವ್ಯಾಸವಾಗಿದೆ. ಆದರೆ, ಮೋದಿ ಹೊಸ ವ್ಯಕ್ತಿಯಾಗಿದ್ದು, ನಿಮಗೆ ಏನು ಬೇಕು ಅದನ್ನು ಅಗತ್ಯವಿರುವ ಎಲ್ಲಾ ಸೌಲಭ್ಯವನ್ನು ನೀಡುತ್ತೇನೆಂದು ಹೇಳಿದೆ. ನಂತರ ಅಧಿಕಾರಿಗಳನ್ನು ಕಳುಹಿಸಿ ಸಾಲಗಳ ಕುರಿತು ಪರಿಶೀಲನೆ ನಡೆಸುವಂತೆ ಆದೇಶಿಸಿದೆ. ಈ ವೇಳೆ ಸಕ್ಕರೆ ಕಾರ್ಖಾನೆಯವರೇ ರೈತರಿಗೆ ಹಣ ನೀಡಬೇಕಿರುವುದು ತಿಳಿಯಿತು.
ನಂತರ ಸಕ್ಕರೆ ಕಾರ್ಖಾನೆಯವರಿಗೆ ಸರ್ಕಾರ ಹಣವನ್ನು ನೀಡುವುದಿಲ್ಲ. ನೇರವಾಗಿ ರೈತರಿಗೆ ಅವರವರ ಬ್ಯಾಂಕ್ ಖಾತೆಗಳಿಗೆ ಜಮಾವಣೆ ಮಾಡುವುದಾಗಿ ತಿಳಿಸಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಬ್ಬು ಬೆಳೆಗಾರರಿಗೆ ರು. 12 ಸಾವಿರ ಕೋಟಿಯನ್ನು ನೀಡಿದೆ. ಸರಿಯಾದ ಸಮಯಕ್ಕೆ ರೈತರಿಗೆ ಹಣವನ್ನು ನೀಡಲು ಸಾಕಷ್ಟು ಶ್ರಮವನ್ನು ಪಡಲಾಗುತ್ತಿದೆ. ರೈತರಿಗೆ ನೀಡಬೇಕಿದ್ದ ಹಣವನ್ನು ಈಗಾಗಲೇ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Advertisement