ಮತ್ತೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್: ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ
ಶ್ರೀನಗರ: ಪಾಕಿಸ್ತಾನ ಸೇನೆ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ತನ್ನ ಪುಂಡಾಟವನ್ನು ಮಂಗಳವಾರ ಮುಂದುವರೆಸಿದೆ.
ಮಧ್ಯರಾತ್ರಿಯಿಂದಲೂ ಪಾಕಿಸ್ತಾನ ಸೇನೆ ಗಡಿಯಲ್ಲಿರುವ ಭಾರತೀಯ ಭದ್ರತಾ ಪಡೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ರಕ್ಷಣಾ ವಕ್ತಾರ ಮಾಹಿತಿ ನೀಡಿದ್ದಾರೆ.
ಪೂಂಜ್ ಸೆಕ್ಟರ್ ನಲ್ಲಿ ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ದೊಡ್ಡ-ದೊಡ್ಡ ಮಾರ್ಟರ್ ಶೆಲ್ ಗಳು ಹಾಗೂ ಆಟೋಮೆಟಿಕ್ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಪಾಕಿಸ್ತಾನ ಸೇನೆ ದಾಳಿಗೆ ಭಾರತೀಯ ಯೋಧರೂ ತಕ್ಕ ಉತ್ತರ ನೀಡುತ್ತಿದ್ದು, ದಾಳಿ ವೇಳೆ ಭಾರತೀಯ ಯೋಧರಿಗೆ ಯಾವುದೇ ಹಾನಿಗಳು ಸಂಭವಿಸಿಲ್ಲ. ಪ್ರಸ್ತುತ ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸುತ್ತಿರುವುದು ಇದು ಮೊದಲೇನಲ್ಲ. ಸೆ.2ರಂದು ಕೂಡ ಅಖ್ನೂರ್ ಸೆಕ್ಟರ್ ನಲ್ಲಿ ಪಾಕಿಸ್ತಾನವು ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡಿಸಿದ್ದರು. ಇದರಂತೆ ಒಂದೇ ವಾರದಲ್ಲಿ ಗಡಿಯಲ್ಲಿ ಪಾಕ್ ಸೇನೆ ಎರಡನೇ ಬಾರಿ ಕದನ ವಿರಾಮ ಉಲ್ಲಂಘಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ