ನವದೆಹಲಿ; ಮದುವೆ ಜವಾಬ್ದಾರಿಯನ್ನು ಕಡಿದುಕೊಳ್ಳುವ ಸಲುವಾಗಿ ಸಹೋದರನೊಬ್ಬ ಸೋದರ ತಂಗಿಯನ್ನು ಹತ್ಯೆ ಮಾಡಿರುವ ಘಟನೆಯೊಂದು ಪೂರ್ವ ದೆಹಲಿಯಲ್ಲಿ ಬುಧವಾರ ನಡೆದಿದೆ.
ತಪಸ್ ಬುರ್ಮಾನ್ ಹತ್ಯೆ ಮಾಡಿದ ವ್ಯಕ್ತಿಯಾಗಿದ್ದಾನೆ. ಯುವತಿ 10 ವರ್ಷದವಳಾಗಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ನಂತರ 2008ರಲ್ಲಿ ಯುವತಿ ಹಸನ್ಪುರದಲ್ಲಿರುವ ಬುರ್ಮಾನ್ ಮನೆಯಲ್ಲಿಯೇ ನೆಲೆಯೂರಿದ್ದಳು. ತಂದೆಯನ್ನು ಕಳೆದುಕೊಂಡಿದ್ದ ಯುವತಿಯ ಮದುವೆಯ ಜವಾಬ್ದಾರಿ ಬುರ್ಮಾನ್ ಮೇಲೆ ಬಿದ್ದಿತ್ತು.
ಮದುವೆ ವಿಚಾರ ಸಂಬಂಧ ಬುರ್ಮಾನ್ ತನ್ನ ತಾಯಿ ಹಾಗೂ ಪತ್ನಿಯೊಂದಿಗೆ ಅನೇಕ ಬಾರಿ ಜಗಳವಾಗಿದೆ. ಇದರಿಂದ ಬೇಸತ್ತಿದ್ದ ಬುರ್ಮಾನ್ ಮದುವೆಯ ಜವಾಬ್ದಾರಿಯನ್ನು ಕಡಿದುಕೊಳ್ಳುವ ಸಲುವಾಗಿ ಸೋದರ ತಂಗಿಯನ್ನು ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.
ಮನೆಯ ಕೊಠಡಿಯಲ್ಲಿಯೇ ಉಸಿರುಗಟ್ಟಿಸಿ ಯುವತಿಯನ್ನು ಹತ್ಯೆ ಮಾಡಲಾಗಿದೆ. ಯುವತಿಯ ಕುತ್ತಿಗೆ ಹಾಗೂ ಕೈಗಳ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಧು ವಿಹಾ ಠಾಣೆಯ ಪೊಲೀಸರು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ. ಆರೋಪಿ ಪ್ರಕರಣಕ್ಕೆ ಆತ್ಮಹತ್ಯೆ ಬಣ್ಣ ನೀಡಲು ಯತ್ನಿಸಿದ್ದಾನೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆಂದು ಡಿಸಿಪಿ ಒಮ್ವಿರ್ ಸಿಂಗ್ ಅವರು ತಿಳಿಸಿದ್ದಾರೆ.