ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇಂದಿನಿಂದ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆ

ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗಟ್ಟಿರುವ ಈ ಪರಿಸ್ಥಿತಿಯಲ್ಲೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದ ಮಹತ್ವದ ವಿಚಾರಣೆ ನಡೆಯಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗಟ್ಟಿರುವ ಈ ಪರಿಸ್ಥಿತಿಯಲ್ಲೇ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾದವ್ ಪ್ರಕರಣದ ಮಹತ್ವದ ವಿಚಾರಣೆ ನಡೆಯಲಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಅಲ್ಲಿನ ಮಿಲಿಟರಿ ನ್ಯಾಯಾಲಯ ಜಾದವ್ ಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದನ್ನು ವಿರೋಧಿಸಿ ಪ್ರಕರಣವನ್ನು ಭಾರತ ಸರ್ಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ದಿದೆ. ಹೀಗಾಗಿ ಇಂದು ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. 
ಜಾದವ್ ರಿಂದಲೇ ತಪ್ಪೊಪ್ಪಿಗೆ ಹೇಳಿಕೆ!
ಪುಲ್ವಾಮ ಉಗ್ರ ದಾಳಿಯಲ್ಲಿ ತನ್ನದೇನೂ ಕೈವಾಡ ಇಲ್ಲ ಎಂದು ಹೇಳಿರುವ ಪಾಕಿಸ್ತಾನವು ಇವತ್ತು ಕುಲಭೂಷಣ್ ವಿಚಾರದ ಬಗ್ಗೆ ಮಾತನಾಡಿ ಭಾರತವನ್ನು ಟೀಕೆ ಮಾಡಿದೆ. ಪಾಕಿಸ್ತಾನದಲ್ಲಿ ಹಿಂಸಾಚಾರಗಳಿಗೆ ಪ್ರಚೋದನೆ ಮಾಡಿರುವುದಾಗಿ ಸ್ವತಃ ಕುಲಭೂಷಣ್ ಅವರೇ ಒಪ್ಪಿಕೊಂಡರೂ ಭಾರತ ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಕಾರ್ಯಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. 
ಪಾಕಿಸ್ತಾನದ ರಹಸ್ಯ ಮಿಲಿಟರಿ ಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಕುಲಭೂಷಣ್ ಅವರು ತಾವು ಅಪರಾಧ ಎಸಗಿರುವುದನ್ನು ಒಪ್ಪಿಕೊಂಡಿರುವುದು ಸಾಬೀತಾಗಿತ್ತು. ಆ ನ್ಯಾಯಾಲಯವು ಕುಲಭೂಷಣ್ ಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಆದರೆ, ಭಾರತವು ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಕುಲಭೂಷಣ್ ಜಾಧವ್ ಅವರು ತಮ್ಮ ನೌಕಾಪಡೆ ಅಧಿಕಾರಿಯಾದರೂ ಸೇವೆಯಿಂದ ನಿವೃತ್ತರಾಗಿದ್ದರು. ಅಲ್ಲದೇ, ಯಾವುದೋ ವೈಯಕ್ತಿಕ ವ್ಯವಹಾರದ ನಿಮಿತ್ತ ಅವರು ಇರಾನ್ ಗೆ ಹೋಗಿದ್ದಾಗ ಪಾಕಿಸ್ತಾನವು ಪಿತೂರಿ ನಡೆಸಿ ಅವರನ್ನು ಅಪಹರಿಸಿದೆ ಎಂದು ಭಾರತ ತನ್ನ ವಾದ ಮಂಡಿಸಿದೆ. 
ಅಂತೆಯೇ, ಕುಲಭೂಷಣ್ ಜಾಧವ್ ಅವರ ವಿಚಾರಣೆ ಪಾರದರ್ಶಕವಾಗಿರಲಿಲ್ಲ ಎಂದೂ ಭಾರತ ಆರೋಪಿಸಿದ್ದು, ಪಾಕಿಸ್ತಾನ ರಹಸ್ಯವಾಗಿ ವಿಚಾರಣೆಯ ನಾಟಕ ಮಾಡಿದೆ ಎಂದು  ಹೇಳಿದೆ. ಹೀಗಾಗಿ, ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿ ಜಾಧವ್ ಗೆ ನೀಡಿದ್ದ ಮರಣದಂಡನೆ ತೀರ್ಪಿಗೆ ತಡೆ ತಂದಿದೆ. ನೆದರ್ಲೆಂಡ್ಸ್ ದೇಶದ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ಇಂದಿನಿಂದ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಸಲಿದೆ. 
ಒಂದು ವೇಳೆ, ಈ ಪ್ರಕರಣದಲ್ಲಿ ಭಾರತಕ್ಕೆ ಜಯ ಸಿಕ್ಕರೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯವಾಗಿ ಭಾರೀ ಮುಖಭಂಗವಾಗಲಿದೆ. ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವ ಭಾರತದ ಪ್ರಯತ್ನಕ್ಕೆ ಇನ್ನಷ್ಟು ಪುಷ್ಟಿ ಸಿಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com