ಮಿರ್ಜಾಪುರ(ಉತ್ತರ ಪ್ರದೇಶ): ಭೂಮಿ ಬಿಟ್ಟುಕೊಡಲು ನಿರಾಕರಿಸಿದ 10 ಆದಿವಾಸಿ ರೈತರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಸ್ಥರು ಮತ್ತು ಗಾಯಗೊಂಡವರನ್ನು ಭೇಟಿ ಮಾಡಲು ಸೋನಭದ್ರಕ್ಕೆ ಆಗಮಿಸಿದ ವೇಳೆ ಪೊಲೀಸರು ತಮ್ಮನ್ನು ತಡೆದಿದ್ದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅತಿಥಿ ಗೃಹದಲ್ಲಿ ರಾತ್ರಿಯಿಡೀ ಕಳೆದು ಪ್ರತಿಭಟನೆ ನಡೆಸಿದ್ದಾರೆ.
ನಿನ್ನೆ ನಾರಾಯಣಪುರದಲ್ಲಿ ಪ್ರಿಯಾಂಕಾ ವಾದ್ರಾ ಅವರನ್ನು ಪೊಲೀಸರು ತಡೆದಿದ್ದು ಇದನ್ನು ಪ್ರತಿಭಟಿಸಿ ಚುನಾರ್ ಅತಿಥಿ ಗೃಹದಲ್ಲಿ ಕಳೆದರು.
ಅತಿಥಿಗೃಹದಲ್ಲಿ ಹವಾ ನಿಯಂತ್ರಿತ ಕೊಠಡಿಯಿಲ್ಲ ಎಂದು ಹೇಳಿ ವಾರಣಾಸಿಗೆ ಕಳುಹಿಸಲು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ಪ್ರಿಯಾಂಕಾ ಅವರನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಸ್ಥರನ್ನು ಭೇಟಿ ಮಾಡುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಿನ್ನೆ ರಾತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಉಳಿದುಕೊಂಡಿದ್ದ ಅತಿಥಿ ಗೃಹದಲ್ಲಿ ರಾತ್ರಿ 10 ಗಂಟೆ ವೇಳೆಗೆ ವಿದ್ಯುತ್ ನಿಲುಗಡೆಯಾಯಿತು. ನಂತರ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಒಟ್ಟು ಸೇರಿ ಹಣ ಸಂಗ್ರಹಿಸಿ ಬಾಡಿಗೆಗೆ ಜನರೇಟರ್ ತಂದರು.
ADG Varanasi, Commissnor Varanasi division and other senior Police & Govt officials leaving Chunar Qila at 1.15 am pic.twitter.com/ceyk4Rg2k0 — Priyanka Gandhi Vadra (@priyankagandhi) July 19, 2019
ಇಂದು ಕೂಡ ಧರಣಿ ಮುಂದುವರಿಸಿರುವ ಪ್ರಿಯಾಂಕಾ ಗಾಂಧಿ, ನಾವಿಲ್ಲಿ ಧರಣಿ ಕುಳಿತು 24 ಗಂಟೆಯಾಗಿದೆ. ಸೋನಭದ್ರ ಗುಂಡಿನ ದಾಳಿಗೆ ಬಲಿಯಾದವರ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ನೀಡುವವರೆಗೆ ನಾನು ಈ ಜಾಗ ಬಿಟ್ಟು ಹೋಗುವುದಿಲ್ಲ ಎಂದಿದ್ದಾರೆ.