ನವದೆಹಲಿ: ತಂದೆ-ತಾಯಿಯ ಜಗಳದಲ್ಲಿ ಏನೂ ಅರಿಯದ ಹಸುಗೂಸೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ಪೂರ್ವ ದೆಹಲಿಯ ಕೊಂಡ್ಲಿ ಎಂಬ ಪ್ರದೇಶದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಮಾತನಿ ಚಕಮಕಿ ನಡೆಯುತ್ತಿದ್ದ ದಂಪತಿಗಳ ಜಗಳ ನಂತರ ಬಡಿದಾಟಕ್ಕೆ ಇಳಿದಿದೆ. ಮಗುವಿನ ತಾಯಿಗೆ ವ್ಯಕ್ತಿ ಕೋಲಿನಿಂದ ಬಡಿಯಲು ಆರಂಭಿಸಿದ್ದಾರೆ. ಈ ವೇಳೆ ಕಬ್ಬಿಣದ ವಸ್ತುವೊಂದು ಮಡಿಲಿನಲ್ಲಿ ಮಲಗಿದ್ದ ಮಗುವಿನ ಹಣೆಗೆ ಬಡಿದಿದೆ. ಕೂಡಲೇ ಮಗುವಿನ ತಲೆಯಿಂದ ರಕ್ತ ಬರಲು ಆರಂಭಿಸಿದೆ.
ಈ ವೇಳೆ ಗಾಬರಿಗೊಂಡ ಪೋಷಕರು ಹತ್ತಿರಕ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ವೈದ್ಯರು, ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.
ಇದಾದ ಬಳಿಕ ಮಂಗಳವಾರ ಬೆಳಿಗ್ಗೆ ಚೆನ್ನಾಗಿದ್ದ ಮಗು, ನಂತರ ಇದ್ದಕ್ಕಿದ್ದಂತೆಯೇ ಸುದೀರ್ಘವಾಗಿ ಅಳಲು ಆರಂಭಿಸಿದೆ. ಮತ್ತೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಪಾಸಣೆ ನಡೆಸಿದ ವೈದ್ಯರು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ. ಬಳಿಕ ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದಾಗಿ ಮಗು ಮೃತಪಟ್ಟಿದೆ ಎಂಬುದು ಮರಣೋತ್ತರ ವರದಿಯಲ್ಲಿ ತಿಳಿದುಬಂದಿದೆ. ಘಟನೆ ಬಳಿಕ ಮಗುವಿನ ತಂದೆ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇದೀಗ ಆರೋಪಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
Advertisement
Advertisement