ನಿಯೋಗ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ
ನಿಯೋಗ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ

'ಚೆನ್ನೈ' ಮೂಲಕ ಭಾರತ-ಚೀನಾ ಸಂಬಂಧಗಳ ಹೊಸಯುಗ ಆರಂಭ: ಪ್ರಧಾನಿ ಮೋದಿ

ಚೆನ್ನೈ ಮೂಲಕ ಭಾರತ ಹಾಗೂ ಚೀನಾ ಸಂಬಂಧಗಳ ಹೊಸ ಯುಗ ಆರಂಭಗೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 
Published on

ಮಾಮಲ್ಲಾಪುರಂ: ಚೆನ್ನೈ ಮೂಲಕ ಭಾರತ ಹಾಗೂ ಚೀನಾ ಸಂಬಂಧಗಳ ಹೊಸ ಯುಗ ಆರಂಭಗೊಂಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 

ಭಾರತ ಮತ್ತು ಚೀನಾ ನಡುವೆ ಬಹುನಿರೀಕ್ಷಿತ ನಿಯೋಗ ಮಟ್ಟದ ಮಾತುಕತೆ ಆರಂಭಗೊಂಡಿದ್ದು, ಈ ವೇಳೆ ಮಾತನಾಡಿರುವ ಪ್ರಧಾನಿ ಮೋದಿಯವರು, ವುಹಾನ್ ಶೃಂಗಸಭೆ ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಹೊಸ ಆವೇಗ, ನಂಬಿಕೆಯನ್ನು ಹುಟ್ಟು ಹಾಕಿತ್ತು. ಇಂದು ಚೆನ್ನೈ ಭಾರತ-ಚೀನಾ ರಾಷ್ಟ್ರಗಳ ನಡುವೆ ಹೊಸ ಯುಗವನ್ನೇ ಆರಂಭಿಸಿದೆ ಎಂದು ಹೇಳಿದ್ದಾರೆ. 

ವುಹಾನ್ ನಲ್ಲಿ ನಮ್ಮ ಮೊದಲ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಆ ಶೃಂಗಶಭೆ ನಮ್ಮ ಸಂಬಂಧಗಳ ಸ್ಥಿರತೆಯನ್ನು ಹೆಚ್ಚಿಸಿತ್ತು. ಎರಡು ರಾಷ್ಟ್ರಗಳ ಸಂವಹನ ತಂತ್ರಗಳೂ ಕೂಡ ಹೆಚ್ಚಾಗಿತ್ತು. ಚೀನಾ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಆಳವಾದ ಸಾಂಸ್ಕೃತಿಕ ಮತ್ತು ವ್ಯಾಪಾರ ಸಂಬಂಧಗಳಿವೆ. 2000 ವರ್ಷಗಳಿಂದಲೂ ಭಾರತ-ಚೀನಾ ನಡುವೆ ಆರ್ಥಿಕ ಶಕ್ತಿಯಿವೆ. ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ವಿವೇಕದಿಂದ ನಿರ್ವಹಿಸಲು ಹಾಗೂ ಅವುಗಳನ್ನು ವಿವಾದಗಳಾಗಿ ಪರಿವರ್ತಿಸಲು ಬಿಡದಿರಲು ನಿರ್ಧರಿಸಿದ್ದೇವೆ. ನಮ್ಮ ಕಾಳಜಿ ಬಗ್ಗೆ ನಾವು ಅತ್ಯಂತ ಸೂಕ್ಷ್ಮತೆಯಿಂದಿರುತ್ತೇವೆ. ಉಭಯ ರಾಷ್ಟ್ರಗಳ ಸಂಬಂಧ ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದಾರೆ. 

ಬಳಿಕ ಮಾತನಾಡಿರುವ ಚೀನಾ ಅಧ್ಯಕ್ಷ ಕ್ಸಿಜಿನ್'ಪಿಂಗ್ ಅವರು, ನೀವು ಹೇಳಿದಂತೆ ನಾವು ಸ್ನೇಹಿತರಂತೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಹೃದಯಪೂರ್ವಕವಾಗಿ ಚರ್ಚೆಗಳಲ್ಲಿ ತೊಡಿಗಿದ್ದೆವು. ನಿಮ್ಮ ಆತಿಥ್ಯ ಬಹಳ ಸಂತೋಷ ತಂದಿದೆ. ನಾನು ಮತ್ತು ನನ್ನ ಸಹೋದ್ಯೋಗಿಗಳು ಅದನ್ನು ಬಲವಾಗಿ ಭಾವಿಸಿದ್ದೇವೆ. ಇದು ನಮಗೆ ಮರೆಯಲಾಗದ ಅನುಭವವನ್ನು ನೀಡಿದೆ ಎಂದು ಎಂದಿದ್ದಾರೆ. 

ವುಹಾನ್‌ನಲ್ಲಿ ನಡೆದ ಉದ್ಘಾಟನಾ ಅನೌಪಚಾರಿಕ ಶೃಂಗಸಭೆಯ ಪರಿಣಾಮ ಸಕಾರಾತ್ಮಕವಾಗಿದೆ. "ಈ ಬೆಳವಣಿಗೆಗಳು ತನ್ನ ಗೋಚರ ಪ್ರಗತಿಯನ್ನು ತೋರಿಸುತ್ತಲೇ ಇವೆ. ನಾವು ಕಾರ್ಯತಂತ್ರದ ಸಂವಹನ, ಹೆಚ್ಚು ಪರಿಣಾಮಕಾರಿ ಪ್ರಾಯೋಗಿಕ ಸಹಕಾರಕ್ಕಾಗಿ ಶ್ರಮಿಸುತ್ತೇವೆ" ಎಂದು ಹೇಳಿದ್ದಾರೆ. ಅಲ್ಲದೆ, ನಾವು ಬಹು ಪಾರ್ಶ್ವ ವೇದಿಕೆಗಳಲ್ಲಿ ನಿಕಟ ಸಹಕಾರವನ್ನು ಹೊಂದಿದ್ದೇವೆ ಎಂದು ಕ್ಸಿ ಪುನರುಚ್ಚರಿಸಿದ್ದಾರೆ. 

ಇದೇ ವೇಳೆ ಶೃಂಗಸಭೆಯ ಆರಂಭಿಕ ಪ್ರಸ್ತಾಪವನ್ನು 'ರೂಪಿಸಿದ್ದಕ್ಕಾಗಿ' ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ ಕ್ಸಿ, ಈ ರೀತಿಯ ಅನೌಪಚಾರಿಕ ಶೃಂಗಸಭೆಯನ್ನು ನಡೆಸಲು ನಾವು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಇದು ತೋರಿಸುತ್ತದೆ. ನಾವು ಅಂತಹ ಅನೌಪಚಾರಿಕ ಶೃಂಗಸಭೆಗಳನ್ನು ನಡೆಸುತ್ತಿರಬೇಕು ಎಂದು ಹೇಳಿದ್ದಾರೆ. 

ನಿಯೋಗ ಮಟ್ಟದ ಮಾತುಕತೆ ವೇಳೆ ಉಭಯ ನಾಯಕರು ಗಡಿ ಭದ್ರತೆ, ವ್ಯಾಪಾರ, ಭಯೋತ್ಪಾದನೆ ಹಾಗೂ ಸಾಂಸ್ಕೃತಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. 

ನಿಯೋಗ ಮಟ್ಟದ ಮಾತುಕತೆ ವೇಳೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಪ್ರಧಾನಮಂತ್ರಿಗಳಿಗೆ ಸಹಾಯ ಮಾಡುತ್ತಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾದ ನಿಯೋಗಕ್ಕೆ ವಿದೇಶಾಂಗ ಸಚಿವ ವಾಂಗ್ ಯಿ ಸಹಾಯ ಮಾಡುತ್ತಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋದ ಪ್ರಬಲ ಸದಸ್ಯ ಡಿಂಗ್ ಕ್ಸುಯೆಸಿಯಾಂಗ್ ಸಹ ಅಧ್ಯಕ್ಷ ಕ್ಸಿ ಅವರ ನಿಯೋಗದ ಭಾಗವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com