ನವದೆಹಲಿ: ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಮುಖಭಂಗವಾದರೂ ಪಾಠ ಕಲಿಯದ ಪಾಕಿಸ್ತಾನ ಮತ್ತೆ ಅಯೋಧ್ಯೆ ತೀರ್ಪಿನ ಕುರಿತು ವಿರೋಧ ವ್ಯಕ್ತಪಡಿಸಿದ್ದು, ಪಾಕಿಸ್ತಾನದ ವ್ಯಾಖ್ಯಾನವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಪಾಕಿಸ್ತಾನದ ಪ್ರತಿಕ್ರಿಯೆ ಕುರಿತಂತೆ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಮಾತನಾಡಿ, ಭಾರತದ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಭಾರತದ ಸಂಪೂರ್ಣ ಆಂತರಿಕ ವಿಷಯವಾಗಿದ್ದು, ಪಾಕಿಸ್ತಾನ ಮಾಡಿರುವ ಅನಗತ್ಯ ಮತ್ತು ಅನಪೇಕ್ಷಿತ ಹೇಳಿಕೆಗಳನ್ನು ತಿರಸ್ಕರಿಸುತ್ತೇವ ಎಂದು ಹೇಳಿದ್ದಾರೆ.
ಅಯೋಧ್ಯೆ ತೀರ್ಪು ಸಂಬಂಧ ನಿನ್ನೆ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿಯವರು, ಇದು ಮೋದಿ ಸರ್ಕಾರದ ಧರ್ಮಾಂಧತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿರ್ಧಾರದಿಂದ ಭಾರತದ ಜಾತ್ಯಾತೀತ ಚಿತ್ರಣದ ವಾಸ್ತವತೆ ಮುನ್ನೆಲೆಗೆ ಬಂದಿದೆ ಎಂದು ಹೇಳಿದ್ದರು.
ಅಯೋಧಅಯೆ ತೀರ್ಪು ಮುಸ್ಲಿಮರ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ. ಅಲ್ಲದೆ, ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಸಂದರ್ಭದಲ್ಲಿಯೇ ಈ ತೀರ್ಪು ಬಂದಿರುವುದು ಅತೀವ ಬೇಸರ ತಂದಿದೆ. ಇನ್ನು ಕೆಲವು ದಿನಗಳು ಕಾಯ್ದು ಆ ನಂತರ ತೀರ್ಪು ಕೊಡಲು ಆಗುತ್ತಿರಲಿಲ್ಲವೇ? ತೀರ್ಪಿನಿಂದಾಗಿ ಕರ್ತಾರ್ಪುರ ಕಾರಿಡಾರ್ ಮೇಲಿನ ಗಮನವನ್ನು ಬೇರೆಡೆಗೆ ಸೆಳೆದಂತಾಗಿದೆ ಎಂದಿದ್ದರು.
ಪಾಕಿಸ್ತಾನ ಸೇನಾ ವಕ್ತಾರ ಆಸಿಫ್ ಗಫೂರ್ ಮಾತನಾಡಿ, ವಿಶ್ವ ಮತ್ತೊಮ್ಮೆ ಉಗ್ರಗಾಮಿ ಭಾರತದ ನೈಜ ಮುಖವನ್ನು ಕಂಡಿದೆ. ಭಾರತವು ಆಗಸ್ಟ್ 5 ರಂದು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನಮವನ್ನು ರದ್ದುಗೊಳಿಸಿತ್ತು. ಇಂದು ಬಾಬ್ರಿ ಮಸೀದಿಯ ನಿರ್ನಾಣಕ್ಕೆ ನಿರ್ಧರಿಸಿದೆ. ಆದರೆ, ಇತರ ಧರ್ಮಗಳನ್ನು ಗೌರವಿಸುವ ಪಾಕಿಸ್ತಾನ, ಗುರುನಾನಕ್ ಭಕ್ತರಿಗೆ ಕರ್ತಾರ್ಪುರ ಕಾರಿಡಾರ್'ನ್ನು ತೆರೆಯುತ್ತಿದೆ ಎಂದು ತಿಳಿಸಿದ್ದರು.
Advertisement