ನೇಪಾಳದ ಎರಡು ನಗರಗಳ ಮರು ನಿರ್ಮಾಣಕ್ಕೆ ಭಾರತ ಸಾಥ್: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಭೂಕಂಪನ
ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಭೂಕಂಪನ

ಮೋತಿಹರಿ-ಅಮ್ಲೆಖಗಂಜ್ ಪೆಟ್ರೋಲಿಯಂ ಪೈಪ್‌ಲೈನ್ ಉದ್ಘಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಘೋಷಣೆ

ನವದೆಹಲಿ: ಭೂಕಂಪನದಿಂದಾಗಿ ತೀವ್ರ ಹಾನಿಗೊಳಗಾದ ನೇಪಾಳ ಎರಡು ಪ್ರಮುಖ ನಗರಗಳ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾರತ-ನೇಪಾಳ ಸರ್ಕಾರದೊಂದಿಗೆ ಕೈ ಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಭಾರತ-ನೇಪಾಳ ನಡುವಿನ ಮೋತಿಹರಿ-ಅಮ್ಲೆಖಗಂಜ್ ಪೆಟ್ರೋಲಿಯಂ ಪೈಪ್‌ಲೈನ್ ಉದ್ಘಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2015ರ ಭೀಕರ ಭೂಕಂಪನ ಇಡೀ ನೇಪಾಳ ಜನರ ಆತ್ಮಸ್ಥೈರ್ಯವನ್ನೇ ಕಸಿದಿದೆ. ಆದರೆ ಭಾರತ ನೇಪಾಳದ ಆಪ್ತ ರಾಷ್ಟ್ರ. ನೇಪಾಳದ ಸಂಕಷ್ಟದ ಸಂದರ್ಭದಲ್ಲಿ ಎಂದಿಗೂ ಕೈ ಬಿಟ್ಟಿಲ್ಲ. ನೇಪಾಳದೊಂದಿಗಿನ ಸೌಹಾರ್ಧ ಸಂಬಂಧ ಭವಿಷ್ಯದಲ್ಲೂ ಮುಂದುವರೆಯಲಿದ್ದು, ನಮ್ಮ ಸಹೋದರ ರಾಷ್ಟ್ರ ನೇಪಾಳದ ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳ ಮರು ನಿರ್ಮಾಣ ಕಾರ್ಯದಲ್ಲಿ ಭಾರತ ನೇಪಾಳ ಸರ್ಕಾರಕ್ಕೆ ಸಾಥ್ ನೀಡಲಿದೆ ಎಂದು  ಹೇಳಿದರು. ಈ ನಗರಗಳಲ್ಲಿ ಭೂಕಂಪನದಿಂದಾಗಿ ಹಾಳಾಗಿರುವ ಮನೆಗಳನ್ನು ಮರು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಇನ್ನು ಭಾರತ-ನೇಪಾಳ ನಡುವಿನ ಮೋತಿಹರಿ-ಅಮ್ಲೆಖಗಂಜ್ ಪೆಟ್ರೋಲಿಯಂ ಪೈಪ್‌ಲೈನ್ ಯೋಜನೆಯನ್ನು ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಜಗತ್ತಿನಲ್ಲೇ ಮೊದಲ ಬಾರಿಗೆ ಎರಡು ದೇಶಗಳ ನಡುವೆ ಬರೊಬ್ಬರಿ 60 ಕಿ.ಮೀ ಉದ್ಧದ ಪೆಟ್ರೋಲಿಯಂ ಪೈಪ್ ಲೈನ್ ಯೋಜನೆ ನಿರ್ಮಾಣವಾಗುತ್ತಿದೆ. 1973 ರಿಂದ ಇಲ್ಲಿಯವರೆಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಟ್ಯಾಂಕರ್ ಗಳಲ್ಲಿ ಪೆಟ್ರೋಲಿಯಂ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈಗ ಭಾರತ ಮತ್ತು ನೇಪಾಳ ಸರ್ಕಾರಗಳ ಸಹಭಾಗಿತ್ವದಲ್ಲಿ ಪೈಪ್ ಲೈನ್ ಮೂಲಕ ಪೆಟ್ರೋಲ್ ಸರಬರಾಜಾಗುತ್ತದೆ. ಇದರಿಂದ ಉಭಯ ದೇಶಗಳಿಗೂ ಅಪಾರ ಪ್ರಮಾಣದ ಹಣ ಉಳಿತಾಯವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.

ಇದೇ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಾರ್ಯಾಲಯ, 'ಭಾರತ-ನೇಪಾಳ ಇಂಧನ ಸಹಕಾರಿ-ಸಹಭಾಗಿತ್ವ ಯೋಜನೆ ಮೂಲಕ ಭಾರತ ಮತ್ತು ನೇಪಾಳ ದೇಶಗಳ ನಡುವಿನ ಸೌಹಾರ್ಧ ಸಂಬಂಧ ಮತ್ತಷ್ಟು ಗಟ್ಟಿಯಾದಂತಾಗಿದೆ. ಅಂತೆಯೇ ಈ ಯೋಜನೆ ಪ್ರದೇಶಿಕ ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಾರಿಗೆ ವೆಚ್ಚವನ್ನು ಕಡಿತಗೊಳಿಸುತ್ತದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com