ಪಾಟ್ನಾ: ಬಿಹಾರದ ಅಂಬಾಲ ಕಂಟೊನ್ಮೆಂಟ್ ಸಮೀಪದ ಅಂಬಾಲಾ- ಜಗದ್ರಿ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬಿನ ಲೂದಿಯಾನಾದಿಂದ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿರುವ ತಮ್ಮೂರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವಾಗ ಈ ದುರ್ಘಟನೆ ನಡೆದಿದೆ ಎಂದು ವಲಸೆ ಕಾರ್ಮಿಕರ ಗುಂಪೊಂದು ಪೊಲೀಸರಿಗೆ ಹೇಳಿದ್ದಾರೆ.
ಘಟನೆ ನಂತರ ಕಾರು ಚಾಲಕ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು, ವಾಹನದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ, ಶೀಘ್ರದಲ್ಲಿಯೇ ಆರೋಪಿ ಚಾಲಕನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತನನ್ನು 25 ವರ್ಷದ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಕಾರ್ಮಿಕನನ್ನು ಅಂಬಾಲ ಕಂಟೊನ್ಮೆಂಟ್ ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶೇಷ ರೈಲಿನಲ್ಲಿ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ 12 ಮಂದಿ ಲೂದಿಯಾನದಿಂದ ಕಾಲ್ನಡಿಗೆಯಲ್ಲಿ ತಮ್ಮೂರಿಗೆ ತೆರಳುತ್ತಿರುವುದಾಗಿ ಕಾರ್ಮಿಕರೊಬ್ಬರು ಹೇಳಿದರು.
ಲೂದಿಯಾನದಲ್ಲಿನ ಕಾರ್ಖಾನೆಯೊಂದರ ಮಾಲೀಕ ತಮ್ಮನ್ನು ಕೆಲಸದಿಂದ ತೆಗೆದುಹಾಕಿ , ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ತಮ್ಮೂರಿಗೆ ಹೋಗಲು ನಿರ್ಧರಿಸಿದ್ದಾಗಿ ಮತ್ತೋರ್ವ ಕಾರ್ಮಿಕರೊಬ್ಬರು ತಿಳಿಸಿದರು.
Advertisement