ಸಾರ್ಕ್ ಸಭೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆ, ಸಂಪರ್ಕ ನಿರ್ಬಂಧವನ್ನು ಪ್ರಸ್ತಾಪಿಸಿದ ಭಾರತ
ನವದೆಹಲಿ: ಇದೇ ವರ್ಷ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ವರ್ಚುವಲ್ ರೂಪದಲ್ಲಿ ನಡೆದ ಸಾರ್ಕ್ ವಿದೇಶಾಂಗ ಸಚಿವರ ಅನೌಪಚಾರಿಕ ಸಭೆಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ಪ್ರಮುಖ ವಿಚಾರವಾಗಿ ಪ್ರಸ್ತಾಪಿಸಿದೆ.
ಗಡಿಯಾಚೆಗಿನ ಭಯೋತ್ಪಾದನೆ, ಸಂಪರ್ಕವನ್ನು ನಿರ್ಬಂಧಿಸುವುದು ಮತ್ತು ವ್ಯಾಪಾರವನ್ನು ತಡೆಯುವುದು ಮೂರು ಪ್ರಮುಖ ಸವಾಲುಗಳಾಗಿವೆ, ಅದು ಸಾರ್ಕ್ ಜಯಿಸಬೇಕು.ಆಗ ಮಾತ್ರ ನಮ್ಮ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷತೆಯನ್ನು ನಾವು ನೋಡುತ್ತೇವೆ ಎಂದು ಸಭೆಯ ಬಳಿಕ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಟ್ವೀಟ್ ಮಾಡಿದ್ದಾರೆ.
ಕಳೆದ 35 ವರ್ಷಗಳಲ್ಲಿ ಸಾರ್ಕ್ ಮಹತ್ವದ ಪ್ರಗತಿಯನ್ನು ಸಾಧಿಸಿದೆ ಆದರೆ, ಸಾಮೂಹಿಕ ಸಹಭಾಗಿತ್ವ ಮತ್ತು ಸಮೃದ್ಧತೆಯ ಪ್ರಯತ್ನಗಳಿಗೆ ಭಯೋತ್ಪಾದನಾ ಕೃತ್ಯಗಳು ಅಡ್ಡಿಯಾಗಿವೆ ಎಂದು ಸಭೆಯಲ್ಲಿ ಜೈ ಶಂಕರ್ ಹೇಳಿದ್ದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಮಾಲ್ಡೀವ್ಸ್, ಭೂತಾನ್ ಮತ್ತು ಶ್ರೀಲಂಕಾ ಸೇರಿದಂತೆ ನೆರೆಹೊರೆಯ ಸಾರ್ಕ್ ರಾಷ್ಟ್ರಗಳಿಗೆ ಭಾರತ ಬೆಂಬಲದ ಬಗ್ಗೆಯೂ ಜೈ ಶಂಕರ್ ಮಾತನಾಡಿದ್ದಾರೆ.
ನೇಪಾಳ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಮಾಲ್ಡೀವ್ಸ್, ಭೂತಾನ್, ಶ್ರೀಲಂಕಾ ಮತ್ತು ಅಪ್ಘಾನಿಸ್ತಾನದ ವಿದೇಶಾಂಗ ಸಚಿವರು ಪಾಲ್ಗೊಂಡಿದ್ದರು. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೆಚ್ಚಿನ ಸಹಭಾಗಿತ್ವ, ಸಂಪರ್ಕತೆ ಮತ್ತು ವ್ಯಾಪಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ