ಮುಂಬೈ: ಕೊರೋನಾ ವೈರಸ್ ಪ್ರಕರಣದ ಸಂಖ್ಯೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವುದರ ನಡುವೆಯೇ ಎಚ್ಚರಿಕೆಯಿಂದ ಕಾರ್ಯಾಚರಣೆ ಪುನಾರಂಭ ಮಾಡಲು ಮುಂಬೈ ನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಜ್ಜುಗೊಂಡಿದೆ.
ಲಾಕ್ ಡೌನ್ ತೆರವುಗೊಳಿಸಿದ ನಂತರ ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನ ನಿಲ್ದಾಣ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ರೂಪಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಟ್ಟುನಿಟ್ಟಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸುವುದು, ಸ್ಯಾನಿಟೈಸ್ ಮಾಡುವುದು, ಸೋಂಕುನಿವಾರಕಗಳನ್ನು ಸಿಂಪಡಿಸಲು ತೀರ್ಮಾನಿಸಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎರಡೂ ಟರ್ಮಿನಲ್ ಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕರ ನಡುವೆ 1.5 ಮೀಟರ್ ಅಂತರ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥೆ ಹೊಣೆ ಹೊತ್ತಿರುವ ಜಿವಿಕೆ ನೇತೃತ್ವದ ಎಂಐಎಎಲ್ ಕಂಪೆನಿ ತಿಳಿಸಿದೆ.
ಚೆಕ್ ಇನ್ ಕೌಂಟರ್ ಗಳಲ್ಲಿ, ಭದ್ರತಾ ಚೆಕ್ ಪಾಯಿಂಟ್ ಗಳಲ್ಲಿ, ಫುಡ್ ಕೋರ್ಟ್, ಲಾಂಜ್ ಏರಿಯಾ, ಬೋರ್ಡಿಂಗ್ ಏರಿಯಾಗಳಲ್ಲಿ ವಿಶೇಷ ಮಾರ್ಕಿಂಗ್ ನ್ನು ಮಾಡಲಾಗಿರುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಫುಡ್ ಕೋರ್ಟ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣ ಕಾರ್ಯಾಚರಣೆ ಪುನಾರಂಭಗೊಳಿಸಿದ ನಂತರ ಯಾವುದಾದರೂ ಪ್ರಯಾಣಿಕರಿಗೆ ಸ್ಕ್ರೀನಿಂಗ್ ವೇಳೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡರೆ ಮುನ್ನೆಚ್ಚರಿಕಾ ಕ್ರಮವಾಗಿ ಎರಡೂ ಟರ್ಮಿನಲ್ ಗಳಲ್ಲಿ ಕ್ವಾರಂಟೇನ್ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿವಿಕೆ ನೇತೃತ್ವದ ಎಂಐಎಎಲ್ ಕಂಪೆನಿ ಹೇಳಿದೆ.
Advertisement