ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಪ್ರತಿಭಟನೆ ಸ್ಥಳಾಂತರದಿಂದ ನಮ್ಮ ಹೋರಾಟ ದುರ್ಬಲಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ರಸ್ತೆಯನ್ನು ತಡೆ ಹಿಡಿದಿದ್ದರ ಉದ್ದೇಶವೇ ಸರ್ಕಾರದ ಮೇಲೆ ಒತ್ತಡ ಹೇರಲು. ಆದರೆ, ಇದೀಗ ಆ ಸ್ಥಳದಿಂದ ಬೇರೆ ಸ್ಥಳಕ್ಕೆ ಪ್ರತಿಭಟನೆ ಸ್ಥಳಾಂತರಿಸುವಂತೆ ನ್ಯಾಯಾಲಯ ಸೂಚಿಸಿದೆ. ಇದರಿಂದ ನಮ್ಮ ಆಗ್ರಹಗಳು ಪೂರ್ಣಗೊಳ್ಳುತ್ತವೆ ಎಂಬ ವಿಶ್ವಾಸ ನಮಗಿಲ್ಲ ಎಂದು ಪ್ರತಿಭಟನಾಕಾರರಾದ ನದೀಮ್ ಖಾನ್ ಹೇಳಿದ್ದಾರೆ.
ಪ್ರತಿಭಟನೆ ಸ್ಥಳಾಂತರಿಸುವಂತೆ ಸೂಚಿಸುವ ಬದಲು ನ್ಯಾಯಾಲಯ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತನಾಡುವಂತೆ ಸೂಚಿಸಬಹುದಿತ್ತು. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ರಸ್ತೆಯನ್ನು ತಡೆಹಿಡಿಯಲಾಗಿದೆ ಎಂದು ದೆಹಲಿ ಐಐಟಿ ವಿದ್ಯಾರ್ಥಿ ಆಸಿಫ್ ಅವರು ಹೇಳಿದ್ದಾರೆ.
ಪ್ರತಿಭಟನೆ ವೇಳೆ ಪ್ರತಿಭಟಕಾರರು ರಸ್ತೆಯ ಒಂದು ಬದಿಯಲ್ಲಿ ಮಾತ್ರ ಪ್ರತಿಭಟನೆ ನಡೆಸುತ್ತಾರೆ, ಮತ್ತೊಂದು ಬದಿಯನ್ನು ಸಂಚಾರಕ್ಕೆ ಬಿಡಲಾಗುತ್ತದೆ ಎಂದು ಆಸೀಫ್ ತಿಳಿಸಿದ್ದಾರೆ.
ಪ್ರತಿಭಟನೆ ಮಾಡುವುದು ನಮ್ಮ ಹಕ್ಕು, ಪ್ರತಿಭಟನೆ ಹಿಂಪಡೆಯುವಂತೆ ನ್ಯಾಯಾಲಯ ಸೂಚಿಸದೇ ಇರುವುದು ನಮ್ಮ ಅದೃಷ್ಟ. ನ್ಯಾಯಾಲಯ ನೇಮಿಸಿರುವ ಮೂವರು ಅಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ಒಮ್ಮತ ತಿಳಿಸುವ ಅವಕಾಶಗಳಿನೆ. ಉನ್ನತ ನ್ಯಾಯಾಲಯವು ನಮ್ಮ ಪ್ರತಿಭಟನೆಯನ್ನು ನ್ಯಾಯ ಸಮ್ಮತವೆಂದು ನೋಡುತ್ತಿದೆ ಎಂದಿದ್ದಾರೆ.
ಈ ನಡುವೆ ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಲನ್ನು ಗುರಾಣಿಗಳಂತೆ ಬಳಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಮ್ಮ ನಿಲುವನ್ನು ಮುಂದುವರೆಸಿದ್ದಾರೆ.
Advertisement