ಮೇಕೆದಾಟು ವಿವಾದ: ತಮಿಳುನಾಡು ಬಿಜೆಪಿ ಘಟಕ ಸರ್ಕಾರದ ಪರ ನಿಲ್ಲುತ್ತದೆ ಎಂದ ಅಣ್ಣಾಮಲೈ

ಕರ್ನಾಟಕ ಮತ್ತು ತಮಿಳುನಾಡು ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಘಟಕ ರಾಜ್ಯ ಸರ್ಕಾರದ ಪರ ನಿಲ್ಲುತ್ತದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಕೆ ಅಣ್ಣಾಮಲೈ
ಕೆ ಅಣ್ಣಾಮಲೈ

ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ಘಟಕ ರಾಜ್ಯ ಸರ್ಕಾರದ ಪರ ನಿಲ್ಲುತ್ತದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಲಿರುವ ಅಣ್ಣಾಮಲೈ ಅವರು ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದರು. ಈ ವೇಳೆ, 'ರಾಜ್ಯದ ರೈತರ ಹಿತದೃಷ್ಟಿಯಿಂದ ತಮಿಳುನಾಡು ಬಿಜೆಪಿ ಘಟಕವು ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ರಾಜ್ಯ ಸರ್ಕಾರದ ಪರವಾಗಿ ನಿಲ್ಲಲಿದೆ ಎಂದು ಹೇಳಿದರು.

"ಮೇಕೆದಾಟು ವಿಷಯದ ಬಗ್ಗೆ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ಅದರ ಬಗ್ಗೆ ರಾಜಕೀಯ ಮಾಡಲು ನಾವು ಬಯಸುವುದಿಲ್ಲ. ಕರ್ನಾಟಕವು ಬಿಜೆಪಿ ಆಡಳಿತದ ರಾಜ್ಯವಾಗಿದ್ದರೂ, ತಮಿಳುನಾಡು ಬಿಜೆಪಿ, ತಮಿಳುನಾಡಿನ ಜನರ ಹಾಗೂ ರೈತರ ಹಿತದೃಷ್ಟಿಯಿಂದ ಕೆಲಸ ಮಾಡುತ್ತದೆ. ಮೇಕೆದಾಟು ವಿಷಯಕ್ಕೆ  ಬಂದಾಗ ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ತಮಿಳುನಾಡು ರೈತರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಹಾಗೂ ಸುಪ್ರೀಂ ಕೋರ್ಟ್ ನಿಗದಿಪಡಿಸಿದಂತೆ ರಾಜ್ಯವು ಕಾವೇರಿ ನೀರಿನ ಪಾಲನ್ನು ಪಡೆಯಬೇಕು ಎಂದು ಅವರು ಹೇಳಿದರು.

ಒಂದು ವೇಳೆ  ಮೇಕೆದಾಟು ಯೋಜನೆ ವಿವಾದ ಬಗೆಹರಿಸಲು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೀರಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಣ್ಣಾಮಲೈ, ಈ ವಿವಾದ ಬಗೆಹರಿಸಲು ಎಲ್ಲ ಪಕ್ಷಗಳ ಸಾಂಘಿಕ ಪ್ರಯತ್ನ ಅಗತ್ಯವಿದೆ. ತಮ್ಮ ಪಕ್ಷದ ಇಬ್ಬರು ಹಿರಿಯ  ಮುಖಂಡರು ರಾಜ್ಯ ಸರ್ಕಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದಾರೆ ಮತ್ತು ಮೇಕೆದಾಟು ವಿಷಯದ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಅವರು ಬೆಂಬಲ ನೀಡುತ್ತಾರೆ. ಮೇಕೆದಾಟು ವಿಷಯದಲ್ಲಿ ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡುವ  ಸರ್ವಪಕ್ಷಗಳ ನಿಯೋಗದಲ್ಲಿ ತಮಿಳುನಾಡು ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com