ಕೋವಿಡ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಬಲವಾದ ರಕ್ಷಾಕವಚ ದೊರೆತಿದೆ: ಪ್ರಧಾನಿ ಮೋದಿ

ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಬಲವಾದ ರಕ್ಷಾಕವಚ ದೊರೆತಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಬಲವಾದ ರಕ್ಷಾಕವಚ ದೊರೆತಿದೆ ಎಂದು ಪ್ರಧಾನಿ ನರೇದ್ರ ಮೋದಿ ಹೇಳಿದ್ದಾರೆ.

ಕೋವಿಡ್ ಲಸಿಕೆ ನೀಡಿಕೆಯಲ್ಲಿ ಇಂದು ಭಾರತ ಮಹತ್ವದ ಸಾಧನೆ ಮಾಡಿದ್ದು, ಈ ವರೆಗೂ ದೇಶದಲ್ಲಿ ವಿತರಣೆಯಾದ ಕೋವಿಡ್ ಲಸಿಕೆಗಳ ಪ್ರಮಾಣ 100 ಕೋಟಿ ದಾಟಿದೆ. ಈ ಹಿನ್ನಲೆಯಲ್ಲಿ ಇಂದು ದೆಹಲಿಯ ಆರ್ ಎಂಎಲ್ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅಲ್ಲಿದ್ದ ಸಿಬ್ಬಂದಿಗಳನ್ನು ಅಭಿನಂದಿಸಿದರು. ಅಲ್ಲದೆ ಆರೋಗ್ಯ ಕಾರ್ಯಕರ್ತರಿಗೆ ಶುಭ ಕೋರಿದರು. 

ಬಳಿಕ ನಡೆದ ದೆಹಲಿಯ ಏಮ್ಸ್‌ ಆವರಣದಲ್ಲಿನ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯಲ್ಲಿ (ಎನ್‌ಸಿಐ) ಇನ್ಫೋಸಿಸ್ ಫೌಂಡೇಷನ್‌ ಸ್ಥಾಪಿಸಿದ ವಿಶ್ರಾಮ ಸದನವನ್ನು ಉದ್ಘಾಟಿಸಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ದೇಶದಲ್ಲಿ ನೀಡುತ್ತಿರುವ ಕೋವಿಡ್‌ ಲಸಿಕೆಯ ಡೋಸ್‌ಗಳು ಗುರುವಾರ 100 ಕೋಟಿ ದಾಟಿದ್ದು ಲಸಿಕಾ ಕಾರ್ಯಕ್ರಮದಲ್ಲಿ ಭಾರತವು ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದೆ. ಕಳೆದ 100 ವರ್ಷಗಳಲ್ಲಿನ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶವು ಈಗ 100 ಕೋಟಿ ಡೋಸ್‌ ಲಸಿಕೆಯ ಬಲವಾದ ‘ರಕ್ಷಾ ಕವಚ’ವನ್ನು ಹೊಂದಿದೆ ಎಂದು ಹೇಳಿದರು.

'2021ರ ಅಕ್ಟೋಬರ್‌ 21 ಈ ವಿಶೇಷ ದಿನ ದೇಶದ ಇತಿಹಾಸದಲ್ಲಿ ದಾಖಲಾಗಿದೆ. ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಈ ಶ್ರೇಯ ಸಲ್ಲುತ್ತದೆ. ದೇಶದ ಎಲ್ಲಾ ಲಸಿಕಾ ಉತ್ಪಾದನಾ ಕಂಪನಿಗಳು, ಲಸಿಕೆ ಸಾಗಣೆಯಲ್ಲಿ ತೊಡಗಿರುವ ಕಾರ್ಮಿಕರು ಮತ್ತು ಲಸಿಕೆಗಳನ್ನು ನಿರ್ವಹಿಸುವ ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 

ಭಾರತದ ಕಾರ್ಪೊರೇಟ್‌ ವಲಯ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಸ್ಥೆಗಳು ದೇಶದ ಆರೋಗ್ಯ ಸೇವೆಗಳನ್ನು ಬಲಪಡಿಸುವಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿವೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಹೊಂದುವ ನಮ್ಮ ಪ್ರಯತ್ನಗಳಲ್ಲಿ ಖಾಸಗಿ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಇನ್ಫೋಸಿಸ್ ಫೌಂಡೇಷನ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯ ಭಾಗವಾಗಿ 806 ಹಾಸಿಗೆಗಳ ವಿಶ್ರಾಮ ಸದನವನ್ನು ನಿರ್ಮಿಸಿದೆ ಎಂದು ಹೇಳಿದರು. 

ಇನ್ನು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವೀಯ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com