ಕಾಸರಗೋಡು: ಸೌದಿ ಅರಬೀಯಾದಿಂದ ಒತ್ತಾಯದಿಂದ ವಾಪಸ್ಸಾದ ಕೂಡಲೇ ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬನನ್ನು ಗ್ಯಾಂಗ್ ವೊಂದು ಅಪಹರಿಸಿ, ಹತ್ಯೆ ಮಾಡಿದೆ ಎಂದು ಕಾಸರಗೋಡು ಪೊಲೀಸರು ಹೇಳಿದ್ದಾರೆ. ಮೃತನನ್ನು ಕುಂಬ್ಳಾದ ಮುಗು ನಿವಾಸಿ ಅಬೂಬಕ್ಕರ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಹಣಕಾಸಿನ ವಿಚಾರವಾಗಿ ಗಲಾಟೆಯಾಗಿ ಸಿದ್ದಿಕಿಯನ್ನು ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಕಾಸರಗೋಡು ಡಿವೈಎಸ್ ಪಿ ಪಿ ಬಾಲಕೃಷ್ಣನ್ ಹೇಳಿದ್ದಾರೆ.
ಉಪ್ಪಾಳದ ಬಂಡಿಯೊಡಿಯಲ್ಲಿನ ಖಾಸಗಿ ಆಸ್ಪತ್ರೆ ಮುಂಭಾಗ ಶುಕ್ರವಾರ ರಾತ್ರಿ ಸಿದ್ದಿಕಿ ಮೃತದೇಹವನ್ನು ಎಸೆಯಲಾಗಿದ್ದ ಕಾರಿನ ಮಾಲೀಕ ಮತ್ತು ಸ್ನೇಹಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಇಬ್ಬರು ವ್ಯಕ್ತಿಗಳು ಎಸೆದ್ದು, ವೇಗವಾಗಿ ಕಾರಿನಲ್ಲಿ ಹೋಗಿದ್ದು ಆಸ್ಪತ್ರೆಯಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಿದ್ದಿಕಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ನಂತರ ಆತ ಹೃದಘಾತದಿಂದ ಸಾವನ್ನಪ್ಪಿರಬಹುದೆಂದು ಬಾಲಕೃಷ್ಣನ್ ಹೇಳಿದ್ದಾರೆ. ಆತನ ಕಾಲಿನ ಮೇಲೆ ನೀಲಿಗಟ್ಟಿದ ಗುರುತುಗಳಿವೆ. ಅದು ಬಿಟ್ಟರೆ ಬೇರೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ಶುಕ್ರವಾರ ಸಿದ್ದಕಿ ಸಹೋದರ ಅನ್ವರ್ ಮತ್ತು ಸಂಬಂಧಿ ಅನ್ಸಾರ್ ಅವರನ್ನು ಅಪಹರಿಸಲಾಗಿತ್ತು. ಇವರಿಬ್ಬರನ್ನು ಬಳಸಿಕೊಂಡ ಗ್ಯಾಂಗ್, ಸಿದ್ದಿಕಿಯನ್ನು ಕಾಸರಗೋಡಿಗೆ ಒತ್ತಾಯದಿಂದ ಕರೆಸಿದೆ. ಭಾನುವಾರ ಮಧ್ಯಾಹ್ನ ಆತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಳಿದಿದ್ದು, ನಂತರ ಹುಟ್ಟೂರು ಮೊಗುಗೆ ಬಂದಿದ್ದಾನೆ.
ಆತನನ್ನು ಕಿಡ್ನಾಪ್ ಮಾಡಿದ ಗ್ಯಾಂಗ್, ಅನ್ವರ್ ಮತ್ತು ಅನ್ಸಾರ್ ಅವರನ್ನು ಬಿಡುಗಡೆ ಮಾಡಿತ್ತು. ಇವರ ಮೇಲೂ ಹಲ್ಲೆಯಾಗಿದ್ದು, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಸಿದ್ದಿಕಿ ಮೃತದೇಹವನ್ನು ಖಾಸಗಿ ಆಸ್ಪತ್ರೆ ಮುಂಭಾಗ ಎಸೆಯಲಾಗಿದೆ. ಹೀಗೆ ಎಸೆದೆ ಅರ್ಧ ಗಂಟೆಗಳ ಹಿಂದೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪೊಲೀಸರ ಬಳಿ ಮೂವರು ಹೆಸರುಗಳಿದ್ದು, ಅವರ ಸುತ್ತ ತನಿಖೆ ನಡೆಸುತ್ತಿದ್ದಾರೆ.
Advertisement