ಮುಂಬೈ: ಮುಂಬೈ ತಾಜ್ ಪ್ರೆಸಿಡೆಂಟ್ ಹೋಟೆಲ್'ಗೆ ಬರುವಂತೆ ಮಹಾರಾಷ್ಟ್ರದಲ್ಲಿರುವ ತನ್ನ ಎಲ್ಲಾ ಶಾಸಕರಿಗೆ ಬಿಜೆಪಿ ಸೂಚನೆ ನೀಡಿದೆ ಎಂದು ಮೂಲಗಳಿಂದ ಬುಧವಾರ ತಿಳಿದುಬಂದಿದೆ.
ಆದಷ್ಟು ಬೇಗ ಬಹುಮತ ಸಾಬೀತು ಪಡಿಸುವಂತೆ ಮಹಾವಿಕಾಸ್ ಅಘಾಡಿ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಬಿಜೆಪಿ ಈ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಫಡ್ನವೀಸ್ ಸಭೆ
ವಿಶ್ವಾಸ ಮತಯಾಚನೆಗೆ ರಾಜ್ಯಪಾಲರು ಠಾಕ್ರೆಗೆ ಸೂಚನೆ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ತಮ್ಮ ನಿವಾಸದಲ್ಲಿ ಬಿಜೆಪಿ ನಾಯಕರೊಂದಿಗೆ ಸಭೆ ಕರೆದಿದ್ದಾರೆಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಸಭೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಇಂದು ಗೋವಾಗೆ ಶಿವಸೇನೆ ಬಂಡಾಯ ನಾಯಕರು...
ಈ ನಡುವೆ ಅಸ್ಸಾಂನ ಗುವಾಹಟಿಯಲ್ಲಿರುವ ಶಿವಸೇನೆ ಬಂಡಾಯ ಶಾಸಕರು ಇಂದು ಗೋವಾಗೆ ತೆರಳುತ್ತಿದ್ದಾರೆಂದು ಹೇಳಲಾಗುತ್ತಿದೆ.
ಗೋವಾದ ರಾಜ್ ರೆಸಾರ್ಟ್ ಆ್ಯಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಈಗಾಗಲೇ 70 ರೂಮ್ ಗಳು ಬುಕ್ ಆಗಿದ್ದು, ಗೋವಾಗೆ ತೆರಳಿದ ಬಳಿಕ ಅಲ್ಲಿಂದ ನೇರವಾಗಿ ನಾಳೆ ಮಹಾರಾಷ್ಟ್ರ ವಿಧಾನಸಭೆಗೆ ಹಾಜರಾಗಲಿದ್ದಾರೆಂದು ವರದಿಗಳು ತಿಳಿಸಿವೆ.
Advertisement