ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿದರೆ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಪಕ್ಷವು ಪ್ರತಿಭಟನೆ ನಡೆಸಲಿದೆ ಎಂದು ಆಡಳಿತಾರೂಢ ಡಿಎಂಕೆಯ ಯುವ ಘಟಕದ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಶನಿವಾರ ಎಚ್ಚರಿಸಿದ್ದಾರೆ.
ಚೆನ್ನೈನ ಐತಿಹಾಸಿಕ ವಳ್ಳುವರ್ ಕೊಟ್ಟಂ ಬಳಿ ನಡೆದ ಬೃಹತ್ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಭಾವನೆಗಳನ್ನು ಕಡೆಗಣಿಸಿದರೆ ಪಕ್ಷವು ಮೂಕಪ್ರೇಕ್ಷಕನಾಗಿ ನೋಡುತ್ತಾ ಇರುವುದಿಲ್ಲ ಎಂದರು.
1967 ರಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಡಿಎಂಕೆ ಅಧಿಕಾರಕ್ಕೆ ಬಂದಿತು ಮತ್ತು ಇಂದಿನ ಆಂದೋಲನವು ಹೊಸ ಆರಂಭವಾಗಿದೆ. ಹಿಂದಿ ಹೇರಿಕೆ ವಿರುದ್ಧದ ಹೋರಾಟ, ಧ್ವನಿ ಎತ್ತುವುದು ಕೇವಲ ಒಂದು ದಿನಕ್ಕೆ ಕೊನೆಯಾಗುವುದಿಲ್ಲ ಎಂದು ಅವರು ಹೇಳಿದರು.
ತಮಿಳರ ಭಾವನೆಗಳನ್ನು ಕಡೆಗಣಿಸಿ ಹಿಂದಿ ಹೇರಿದರೆ ತಮಿಳುನಾಡಿನ ಹೊರಗೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಮತ್ತು ಮುಖ್ಯಮಂತ್ರಿಯವರ ಅನುಮತಿಯೊಂದಿಗೆ ನವದೆಹಲಿಗೆ ಕೊಂಡೊಯ್ಯಲಾಗುವುದು” ಎಂದು ಉದಯನಿಧಿ ಬೃಹತ್ ಸಭೆಯನ್ನುದ್ದೇಶಿಸಿ ಹೇಳಿದರು.
ಸಂಸದೀಯ ಸಮಿತಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ಡಿಎಂಕೆ ಯುವ ಘಟಕ ಮತ್ತು ವಿದ್ಯಾರ್ಥಿಗಳ ವಿಭಾಗವು "ಹಿಂದಿ ಹೇರಿಕೆ" ವಿರೋಧಿಸಿ ರಾಜ್ಯಾದ್ಯಂತ ಆಂದೋಲನವನ್ನು ನಡೆಸಿತು. ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳಂತಹ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಹಿಂದಿ ಮತ್ತು ದೇಶದ ಇತರ ಭಾಗಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಾಗಿರಬೇಕು ಎಂದು ಸಂಸದೀಯ ಸಮಿತಿಯು ಇತ್ತೀಚೆಗೆ ಶಿಫಾರಸು ಮಾಡಿದೆ.
Advertisement